ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳೆಯೊಬ್ಬರಿಗೆ 50 ಸಾವಿರ ರೂ. ವೈಯಕ್ತಿಕ ಪರಿಹಾರ ನೀಡಿದ್ದಾರೆ.
ಬಾದಾಮಿಯಲ್ಲಿ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಲಕ್ಕವ್ವ ಗಾರವಾಡ ಎಂಬವರಿಗೆ ಸಿದ್ದರಾಮಯ್ಯ ಅವರು ಈ ಪರಿಹಾರವನ್ನು ನೀಡಿದ್ದಾರೆ.
ಕ್ಷೇತ್ರದ ನಿಲುವಿಗಿ ಗ್ರಾಮದ ನಿವಾಸಿ ಲಕ್ಕವ್ವ ಗಾರವಾಡ ಪತಿ ಇತ್ತೀಚೆಗೆ ಸಿಡಿಲು ಬಡಿದು ಸಾವನ್ನಪ್ಪಿದ್ದರು. ಇದುವರೆಗೂ ಪರಿಹಾರ ಬಾರದ ಹಿನ್ನೆಲೆಯಲ್ಲಿ ಮಹಿಳೆ ಇಂದು ಸಿದ್ದರಾಮಯ್ಯ ಭೇಟಿಗೆ ಬಂದಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ಸರಕಾರದಿಂದ ಸಿಗಬೇಕಾದ ಸೌಲಭ್ಯವನ್ನು ಆದಷ್ಟು ಬೇಗ ಕಲ್ಪಿಸೋದಾಗಿ ಮಹಿಳೆಗೆ ಭರವಸೆ ನೀಡಿದ್ದಾರೆ.
ಗುರುವಾರ ಆಲೂರು ಎಸ್.ಕೆ ಗ್ರಾಮದಲ್ಲಿ ಪಂಚಾಯತ್ ಕಟ್ಟಡ ಶಿಲಾನ್ಯಾಸ ನೆರವೇರಿಸಿ ಲೋಕಸಭೆ ಚುನಾವಣೆಯ ವೇಳೆ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾದ ವಿಚಾರವನ್ನು ಪ್ರಸ್ತಾಪಿಸಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದರು. ಬಿಜೆಪಿಗೆ ಬಾದಾಮಿಯಿಂದ 9 ಸಾವಿರ ಲೀಡ್ ಹೋಗಿದೆ. ಬಿಜೆಪಿಯವರು ಏನು ಕೆಲಸ ಮಾಡಿದ್ದಾರೆ ಎಂದು ಅವರಿಗೆ ವೋಟ್ ಹಾಕುತ್ತೀರಾ ಅಂತ ನನಗೆ ಗೊತ್ತಾಗುತ್ತಿಲ್ಲ. ಅಭಿವೃದ್ಧಿ ಕೆಲಸ ಮಾಡಿದರೂ ನಮಗೆ ವೋಟ್ ಹಾಕುವುದಿಲ್ಲ. ಹೀಗೆ ಯಾಕೆ ಮಾಡುತ್ತೀರಿ ಎಂದು ಪ್ರಶ್ನಿಸಿ ಜನರಲ್ಲಿ ಅಸಮಾಧಾನ ಹೊರ ಹಾಕಿದ್ದರು.
ಆದರೆ ಇಂದು ನಾನು ಹೇಳಿದ್ದು, ಹಾಗಲ್ಲ. ಕೆಲಸ ಮಾಡುವವರಿಗೆ ಮತ ಹಾಕಿ, ಕೆಲಸ ಮಾಡದವರಿಗೆ ಏಕೆ ಮತ ಹಾಕುತ್ತೀರಿ ಎಂದು ಹೇಳಿದ್ದೆ. ಇದರಲ್ಲಿ ತಪ್ಪೇನಿದೆ? ಆದರೆ ಮಾಧ್ಯಮದವರು ನಾನು ಹೇಳಿದ ರೀತಿ ಪ್ರಸಾರ ಮಾಡಿಲ್ಲ. ಸಿಎಂ ಅವರಿಗೆ ನನ್ನನ್ನು ಲಿಂಕ್ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.