– ಪ್ರಿಯಾಂಕ್ ಖರ್ಗೆ, ಕೆ.ಜೆ.ಜಾರ್ಜ್ ಕೈ ತಪ್ಪುತ್ತಾ ಮಂತ್ರಿಗಿರಿ?
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕಾರೆಂದು ಭಾವಿಸಿ ಸಿಎಂ ಕುಮಾರಸ್ವಾಮಿಯವರ ಕಾರನ್ನು ಹತ್ತಲು ಮುಂದಾಗಿದ್ದ ಪ್ರಸಂಗ ಇಂದು ಕುಮಾರಕೃಪಾ ಅತಿಥಿಗೃಹದಲ್ಲಿ ನಡೆಯಿತು.
ಕೆ.ಕೆ ಗೆಸ್ಟ್ ಹೌಸ್ನಲ್ಲಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಲು ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಗಮಿಸಿದ್ದರು. ಮಾತುಕತೆಯ ಬಳಿಕ ಹೊರ ಬಂದ ಸಿದ್ದರಾಮಯ್ಯ ಅವರು ಕೆ.ಕೆ. ಗೆಸ್ಟ್ ಹೌಸ್ ಮುಂದೆ ನಿಲ್ಲಿಸಿದ್ದ ಸಿಎಂ ಕಾರನ್ನು ಹತ್ತಲು ಮುಂದಾಗಿದ್ದರು. ತಕ್ಷಣವೇ ಅದು ತಮ್ಮ ಕಾರು ಅಲ್ಲವೆಂದು ತಿಳಿದು, ತಮ್ಮ ಕಾರಿನ ಕಡೆಗೆ ಹೋದರು.
ಅತೃಪ್ತ ಶಾಸಕರ ಮನವೊಲಿಸಲು ದೋಸ್ತಿ ನಾಯಕರು ಪ್ಲಾನ್ ರೂಪಿಸುತ್ತಿದ್ದಾರೆ. ಸಭೆಯಲ್ಲಿ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಸಚಿವ ಸಂಪುಟ ವಿಸ್ತರಣೆ ಬೇಡ, ಪುನಾರಚನೆ ಮಾಡೋಣ ಎನ್ನುವ ಮಾತುಗಳು ಕೇಳಿ ಬಂದಿವೆ. ಹಿರಿಯ ಹಾಗೂ ಕೆಲವು ಕಿರಿಯ ಸಚಿವರಿಗೆ ಮನವಿ ಮಾಡಿ ರಾಜೀನಾಮೆ ಪಡೆದು ಅತೃಪ್ತರಿಗೆ ಮಂತ್ರಿಗಿರಿ ನೀಡಿ ಸಮಾಧಾನಪಡಿಸೋಣ ಎಂದು ಮೈತ್ರಿ ನಾಯಕರು ಚರ್ಚೆ ಮಾಡಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಯಾರನ್ನ ಕೈಬಿಡಬೇಕು?
ಯಾರಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಪ್ರಶ್ನೆ ಮೈತ್ರಿ ನಾಯಕರಿಗೆ ಕಾಡುತ್ತಿದೆ. ಸಚಿವ ಸ್ಥಾನದಿಂದ ಕೃಷ್ಣಬೈರೇಗೌಡ, ಕೆ.ಜೆ.ಜಾರ್ಜ್, ಆರ್.ವಿ.ದೇಶಪಾಂಡೆ, ಯು.ಟಿ.ಖಾದರ್, ಪ್ರಿಯಾಂಕ್ ಖರ್ಗೆ ಹಾಗೂ ಜಯಮಾಲ ಅವರನ್ನು ಕೈಬಿಡುವ ಬಗ್ಗೆ ಚಿಂತನೆ ನಡೆದಿದೆ. ಅತೃಪ್ತರಾದ ರೋಷನ್ ಬೇಗ್, ಡಾ.ಸುಧಾಕರ್, ಬಿ.ಸಿ.ಪಾಟೀಲ್, ಭೀಮಾನಾಯ್ಕ್, ರಮೇಶ್ ಜಾರಕಿಹೊಳಿ, ನಾಗೇಂದ್ರ ಹಾಗೂ ಅವರಿಗೆ ಮಂತ್ರಿಗಿರಿ ನೀಡುವ ಕುರಿತು ಮಾತುಕತೆಯಾಗಿದೆ. ಉಳಿದಂತೆ ಪಕ್ಷೇತರ ಶಾಸಕರಾದ ನಾಗೇಶ್ ಹಾಗೂ ಶಂಕರ್ ಅವರಿಗೆ ಜೆಡಿಎಸ್ ಕೋಟಾದಿಂದ ಸಚಿವ ಸ್ಥಾನ ಒದಗಿಸುವ ಬಗ್ಗೆಯೂ ಚರ್ಚೆಯಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.