ಕೊಪ್ಪಳ: ರಾಜ್ಯದಲ್ಲಿ ಮೈತ್ರಿ ಸರ್ಕಾರವಲ್ಲ, ಮೂರಾಬಟ್ಟೆ ಸರ್ಕಾರವಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಶೆಟ್ಟರ್, ಮಂಡ್ಯದಲ್ಲಿ ಈಗಾಗಲೇ ಸುಮಲತಾ ಗೆದ್ದಾಗಿದೆ. ಸುಮಲತಾ ಓರ್ವ ಹೆಣ್ಣು ಮಗಳಾಗಿ ದೇವೇಗೌಡ, ಕುಮಾರಸ್ವಾಮಿಯನ್ನು ಹೆದರಿಸಿ ಬಿಟ್ಟಿದ್ದಾರೆಂದು ಶೆಟ್ಟರ್ ದೇವೆಗೌಡ ಕುಟುಂಬದ ವಿರುದ್ಧ ವ್ಯಂಗ್ಯವಾಡಿದರು. ದೇವೇಗೌಡರು, ಕುಮಾರಸ್ವಾಮಿಯನ್ನು ಮಂಡ್ಯ ಬಿಟ್ಟು ಬರದಂತೆ ಸುಮಲತಾ ಮಾಡಿದ್ದಾರೆ ಎಂದು ಲೇವಡಿ ಮಾಡಿದರು. ಹೆಸರಿಗೆ ಅಷ್ಟೇ ಜ್ಯಾತ್ಯಾತೀತ ಜನತಾದಾಳ. ಆದರೆ ಮುಂಜಾನೆಯಿಂದ ಮಾಡೋದು ಬರೀ ಜಾತಿ ರಾಜಕಾರಣ ಎಂದು ಕಿಡಿಕಾರಿದರು.
ನೀವು ಒಂದೇ ಹೆಸರಿನ ಎಷ್ಟು ಬೇಕಾದರೂ ಅಭ್ಯರ್ಥಿಗಳನ್ನು ಹಾಕಿದರೂ, ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆಲ್ತಾರೆ. ಹಾಗೆಯೇ ಕಲಬುರಗಿಯಲ್ಲಿ ಜಾಧವ್ ಗೆಲ್ತಾರೆ ಎಂದು ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಮತ್ತು ದೇಶದಲ್ಲಿ ಮೋದಿ ಸುನಾಮಿ ಇದೆ. ಸುನಾಮಿಗೆ ಸಿಕ್ಕು ಕಾಂಗ್ರೆಸ್-ಜೆಡಿಎಸ್ ಕೊಚ್ಚಿ ಹೋಗಿ ನಿರ್ಣಾಮವಾಗಲಿವೆ ಎಂದು ವಾಗ್ದಾಳಿ ನಡೆಸಿದರು.
ದೇವೇಗೌಡರಿಗೆ ಬೆಳಗ್ಗೆಯಿಂದ ಅವರ ಕುಟುಂಬದ ಚಿಂತೆ, ಮಕ್ಕಳು ಮೊಮ್ಮಕ್ಕಳು ಎಲ್ಲರೂ ರಾಜಕಾರಣಕ್ಕೆ ಬಂದಿದ್ದಾರೆ. ಅದೇ ರೀತಿ ಪತ್ನಿ ಚೆನ್ನಮ್ಮಾರನ್ಮ ರಾಜ್ಯಸಭಾ ಸದಸ್ಯರನ್ನು ಮಾಡಲಿ ಎಂದು ಶೆಟ್ಟರ್ ಕುಟುಕಿದರು. ಮಾನ ಮರ್ಯಾದೆ ನಾಚಿಕೆ ಇಲ್ಲ, ಕುಟುಂಬದ ಸಲುವಾಗಿ ಜೆಡಿಎಸ್ ಇದೆ ಎಂದರು.
ರಾಹುಲ್ ಗಾಂಧಿ ವಿರುದ್ಧವೂ ಜಗದೀಶ್ ಶೆಟ್ಟರ್ ಹರಿಹಾಯ್ದರು. ಯುದ್ಧವಾದರೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ನವರು ಸಾಕ್ಷಿ ಕೇಳ್ತಾರೆ. ಇವರೆಲ್ಲ ಪಾಕಿಸ್ತಾನದ ಏಜೆಂಟ್ ಇರಬೇಕು ಎಂದು ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.