ದಾವಣಗೆರೆ: ಸಮ್ಮಿಶ್ರ ಸರ್ಕಾರ ನೀರಿನ ಮೇಲೆ ಗುಳ್ಳೆ ಇದ್ದಂತೆ. ಯಾವಾಗ ಬೇಕಾದರೂ ಹೊಡೆದು ಹೋಗಬಹುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಯಾವುದೂ ಸರಿ ಇಲ್ಲ. ಕ್ಯಾಬಿನೆಟ್ ವಿಸ್ತೀರ್ಣದ ನಂತರ ಸರ್ಕಾರ ಪತನವಾಗಲಿದೆ. ಜನಾದೇಶವನ್ನು ಮರೆತು ಸಮ್ಮಿಶ್ರ ಸರ್ಕಾರ ಮಾಡಿಕೊಂಡಿದ್ದು, ಇದು ಅಪವಿತ್ರ ಮೈತ್ರಿಯಾಗಿದ್ದಲ್ಲದೇ ಹೊಂದಾಣಿಕೆ ಹಾಗೂ ಸಮನ್ವಯತೆ ಇಲ್ಲದೆ ಇರುವ ಸರ್ಕಾರವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಈಗಲೂ ಸಹ ಪರಸ್ಪರ ಮುಖ ನೋಡಿಕೊಳ್ಳುವುದಿಲ್ಲ. 100 ದಿನಗಳ ಸಂಭ್ರಮಾಚರಣೆಯನ್ನು ಸರ್ಕಾರದಿಂದ ಆಚರಣೆ ಮಾಡಿಲ್ಲ. ಕೇವಲ ಜೆಡಿಎಸ್ ಪಕ್ಷದಿಂದ ಮಾತ್ರ ಪತ್ರಿಕೆಗಳಲ್ಲಿ ಜಾಹಿರಾತು ನೀಡಿದರು. ಇದರಲ್ಲೇ ಗೊತ್ತಾಗುತ್ತೆ ಅವರಲ್ಲಿ ಎಷ್ಟರ ಮಟ್ಟಿಗೆ ಹೊಂದಾಣಿಕೆ ಇದೆ ಎನ್ನುವುದು ಅಂತ ಟೀಕಿಸಿದರು.
ಬೆಳಗಾವಿ ರಾಜಕೀಯ ವಿಚಾರ ಮಾತ್ರ ಸದ್ಯಕ್ಕೆ ಹೊರಗೆ ಬಂದಿದೆ. ಇಂಥದ್ದೇ ಸಮ್ಮಿಶ್ರ ಸರ್ಕಾರದಲ್ಲಿ ಒಳ ಜಗಳಗಳು ಜಾಸ್ತಿ ಇವೆ. ಕಾಂಗ್ರೆಸ್ ಸಚಿವರಾದ ಡಿಕೆಶಿ ಹಾಗೂ ಪರಮೇಶ್ವರ್ ಜೆಡಿಎಸ್ ವಕ್ತಾರರಾಗಿ ಮಾತನಾಡುತ್ತಿದ್ದಾರೆ. ಪರಮೇಶ್ವರ್ಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಿನಿಸ್ಟರ್ ಪೋಸ್ಟ್ ನೀಡಲು ಹಿಂದೇಟು ಹಾಕಿದ್ದರು. ಆದರೆ ಕುಮಾರಸ್ವಾಮಿಯವರು ಮಿನಿಸ್ಟರ್ ಪೋಸ್ಟ್ ಕೊಟ್ಟಿದ್ದಾರೆ. ಆದ್ದರಿಂದ ಮಾತನಾಡುವುದು ಅನಿವಾರ್ಯವಾಗಿದೆ ಎಂದರು.
ಸಚಿವ ಜಮೀರ್ ಅಹಮ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನವರು ಓಟ್ ಬ್ಯಾಂಕ್ ರಾಜಕೀಯ ಮಾಡಿಕೊಂಡೇ ಬಂದಿದ್ದಾರೆ. ಅಲ್ಪಸಂಖ್ಯಾತರ ಓಟ್ ಸೆಳೆಯುವುದಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ತಿರುಗೇಟು ನೀಡಿದ ಅವರು, ಮೋದಿ ಹತ್ಯೆಗೆ ಸ್ಕೆಚ್ ವಿಚಾರವಾಗಿ ಮಾತನಾಡಿ ಕಾಂಗ್ರೆಸ್ನವರು ಪೊಲೀಸರಿಗೆ ಫ್ರೀಡಂ ಕೊಡಬೇಕು. ಸಾಕ್ಷ್ಯಧಾರಗಳ ಮೇಲೆ ವಿಚಾರವಾದಿಗಳನ್ನು ಬಂಧಿಸಿದ್ದಾರೆ. ಆದರೆ ಇದನ್ನು ವಿರೋಧಿಸಿ ಸೋ ಕಾಲ್ಡ್ ವಿಚಾರವಾದಿಗಳು ಪ್ರತಿಭಟನೆ ಮಾಡುತ್ತಿದ್ದು, ಕಾಂಗ್ರೆಸ್ ನವರು ಅವರೊಂದಿಗೆ ಶಾಮೀಲ್ ಆಗಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv