ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಶಾಸಕ ಯತ್ನಾಳ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಕುಮಾರಸ್ವಾಮಿ, ದೊರೆಸ್ವಾಮಿಯವರ ಬಗ್ಗೆ ಚರ್ಚೆ ನಡೆಯುವ ಸಂದರ್ಭದಲ್ಲಿ ನಮ್ಮ ಕುಟುಂಬದ ಬಗ್ಗೆಯೂ ಯತ್ನಾಳ್ ಅವರು ಆರೋಪ ಮಾಡಿದರು. ನಮ್ಮ ತಂದೆ ಇನ್ಸ್ಪೆಕ್ಟರ್ ಲೆವಲ್ನಿಂದ ಸಾವಿರಾರು ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಯತ್ನಾಳ್ ಈ ಸದನದಲ್ಲಿ ಕೂತಿದ್ದಕ್ಕೆ ಈ ಮಾತನ್ನ ಹೇಳುತ್ತಿದ್ದೇನೆ. ಯತ್ನಾಳ್ ಮಾಡಿದ ಆರೋಪ ಸಾಬೀತು ಮಾಡಿದರೆ ನಾನು ರಾಜಕೀಯವಾಗಿ ಇಂದೇ ನಿವೃತ್ತಿ ಪಡೆಯುತ್ತೇನೆ ಎಂದು ಯತ್ನಾಳ್ಗೆ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ನಮ್ಮ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಯಾರ್ಯಾರು ನನ್ನನ್ನು ಭೇಟಿ ಮಾಡಿ ಏನೇನೂ ಆಫರ್ ಕೊಟ್ಟರು ಗೊತ್ತಿದೆ. ಅವರನ್ನೆಲ್ಲಾ ನಾನು ಬೈಯ್ದು ಕಳುಹಿಸಿದೆ. ನಿಮ್ಮನ್ನು ಆಯಕಟ್ಟಿನ ಜಾಗಗಳಿಗೆ ಕಳಿಸಿದರೆ ಆ ಸಂಸ್ಥೆ ಉಳಿಯುತ್ತಾ ಎಂದು ಹೇಳಿ ಕಳುಹಿಸಿದೆ. ಆದರೆ ಈಗ ಅದೇ ಅಧಿಕಾರಿಗಳು ಎಲ್ಲೆಲ್ಲಿದ್ದಾರೆ ಗೊತ್ತಿದೆಯಾ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ರೇವಣ್ಣ ಎದ್ದು ನಿಂತು ಅವರ ಹೆಸರನ್ನು ಹೇಳಿ ಎಂದು ಕೇಳಿದರು. ಆಗ ಕುಮಾರಸ್ವಾಮಿ, ನಾನು ಯಾರ ಹೆಸರನ್ನು ಹೇಳಲ್ಲ. ನಾನು ಸೂಕ್ಷ್ಮವಾಗಿ ಹೇಳಿದೆ ಅಷ್ಟೇ ಎಂದರು.