ಕಲಬುರಗಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ನಮ್ಮನ್ನು ದೇಶದ್ರೋಹಿಗಳು ಅಂತಾರೆ ಗೋಧ್ರಾ ಹತ್ಯಾಕಾಂಡ ಸೇರಿದಂತೆ ಹಲವು ಅಮಾಯಕರ ಪ್ರಾಣ ತೆಗೆದ ನರಭಕ್ಷಕರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಜೋಶಿ ಹಾಗೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ
ಕಲಬುರಗಿ ನಗರದ ಪೀರ್ ಬಂಗಲಾದಲ್ಲಿ ಆಯೋಜಿಸಿದ ಸಿಎಎ ವಿರೋಧಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ಚಾಮರಾಜನಗರದಲ್ಲಿ ಜಿಹಾದಿಗಳ ಬಂಧನ ಎಂದು ಹೇಳುತ್ತಾರೆ. ಇನ್ನೊಂದು ಕಡೆ ಬಾಂಬ್ ಪ್ರಕರಣ ಎನ್ನುತ್ತಾರೆ. ಇದು ಬಿಜೆಪಿ ಸರ್ಕಾರದ ಪ್ಲ್ಯಾನ್ ಅಲ್ಲ, ಮಂಗಳೂರಿನ ಪ್ರಭಾಕರ ಭಟ್ ಅವರ ಪ್ಲ್ಯಾನ್ ಆಗಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ಹುಬ್ಬಳ್ಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿದ್ದಾಗ ನೆಹರು ಮಾಡಿದ ತಪ್ಪುಗಳನ್ನು ಸರಿ ಮಾಡುತ್ತಿರುವುದ್ದಾಗಿ ಅವರಿಗೆ ಅವಮಾನ ಮಾಡಿದ್ದಾರೆ. ಸ್ವಾತಂತ್ರ್ಯಕ್ಕೆ ಎಲ್ಲಾ ಜನಾಂಗದವರು ಅವರ ಜೊತೆ ಹೋರಾಟ ಮಾಡಿದ್ದಾರೆ. ಗಾಂಧಿ, ನೆಹರು ಅವರು ಇರುವಾಗ ನೀವು ಹುಟ್ಟಿರಲಿಲ್ಲ. ಇನ್ನು ಆರ್ಟಿಕಲ್ 370 ರದ್ದು ಮಾಡಿ ಅಲ್ಲಿ ತುರ್ತು ಪರಿಸ್ಥಿತಿ ನಿರ್ಮಿಸಿದ್ದು, ಅಲ್ಲಿ ಈಗ 40 ಸಾವಿರ ಸೈನಿಕರನ್ನು ನಿಯೋಜನೆ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಜನಪರ ಸರ್ಕಾರ ಅಲ್ಲ ಅದು 155 ಸರ್ಕಾರವಾಗಿದೆ. ಬ್ರಿಟಿಷ್ ಆಡಳಿತಕ್ಕಿಂತ ಹೆಚ್ಚಿನ ಆಡಳಿತವನ್ನು ಈ ಹಕ್ಕಬುಕ್ಕರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮುಸ್ಲಿಂ ಸಮುದಾಯದವರ ವಿರುದ್ಧ ಆರೋಪ ಮಾಡುವ ಈ ಸರ್ಕಾರ ಮುಂದಿನ ದಿನಗಳಲ್ಲಿ ತೆರಬೇಕಾಗುತ್ತದೆ. ಸೋಮವಾರದ ಮಂಗಳೂರಿನ ಘಟನೆ ಮುಸ್ಲಿಂ ಸಮುದಾಯದವರನ್ನು ಹಿಂದು ಸಮುದಾಯದವರು ಕೆಟ್ಟದಾಗಿ ನೋಡುವಂತೆ ಆರ್ಎಸ್ಎಸ್ ಹಾಗೂ ವಿಶ್ವಹಿಂದೂ ಪರಿಷತ್ ಮಾಡುತ್ತಿದೆ. ಆದರೆ ಇದರಿಂದ ಯಾವ ಮುಸ್ಲಿಂ ಬಾಂಧವರು ಉದ್ರೆಕಕ್ಕೆ ಒಳಗಾಗಿ ಯಾವ ಹೇಳಿಕೆಯನ್ನು ನೀಡಬೇಡಿ ಎಂದು ಎಚ್ಡಿಕೆ ಬಹಿರಂಗ ಸಭೆಯಲ್ಲಿ ಹೇಳಿದರು.