ಮಂಡ್ಯ: ಕರ್ನಾಟಕ ವಿಧಾನಸಭಾ ಚುನಾವಣೆಗೆಂದು ಪ್ರಚಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಿಮಾನಿಗಳ ಮೇಲೆ ಕೋಪಗೊಂಡು ರೇಗಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಇಂದು ಕುಮಾರಸ್ವಾಮಿ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮಕ್ಕೆ ಪ್ರಚಾರಕ್ಕೆಂದು ಹೋಗಿದ್ದರು. ಆಗ ಅಭಿಮಾನಿಗಳು ಕುಮಾರಸ್ವಾಮಿ ಅವರಿಗೆ ಪದೇ ಪದೇ ಬಸ್ಸಿನಿಂದ ಕೆಳಗಿಳಿಯುವಂತೆ ಬೇಡಿಕೆಯಿಡುತ್ತಿದ್ದರು. ಈ ವೇಳೆ ಅಭಿಮಾನಿಗಳ ವಿರುದ್ಧ ಕುಮಾರಸ್ವಾಮಿ ರೇಗಾಡಿದ್ದು, ನನಗೆ ಸಮಯ ಇಲ್ಲ ಇನ್ನು ತುಂಬಾ ಗ್ರಾಮಗಳಿಗೆ ತೆರಳಬೇಕಿದೆ ಎಂದು ಹೇಳಿದ್ದಾರೆ.
ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಪರವಾಗಿ ರೋಡ್ ಶೋ ಆರಂಭಿಸಿದಾಗ ಬಸ್ನಿಂದ ಕೆಳಗಿಳಿದು ಪ್ರಚಾರ ಮಾಡಿ. ಅಲ್ಲದೇ ವಾಹನದ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಅಭಿಮಾನಿಗಳು ಕೇಳಿಕೊಂಡಿದ್ದರು. ಈ ವೇಳೆ ಪ್ರಚಾರ ವಾಹನದ ಮೇಲಿದ್ದ ಕುಮಾರಸ್ವಾಮಿ ಕೆಳಗಿಳಿಯಲು ಆಗಲ್ಲ ನಾನಿನ್ನು ಸಾಕಷ್ಟು ಊರುಗಳಿಗೆ ಹೋಗಬೇಕಿದೆ. ನನ್ ಆರೋಗ್ಯದ ಗತಿ ಏನಾಗಬೇಕು. ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಕಾರ್ಯಕರ್ತರ ಮನವೊಲಿಸಿ ಮುಂದೆ ಹೋಗಿದ್ದಾರೆ.