ಬೆಂಗಳೂರು: ಸಾಣೇಹಳ್ಳಿ ಶ್ರೀಗಳ ವಿರುದ್ಧ ನೂತನ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ದುರದುಷ್ಠಕರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.
ರಾಜಕೀಯಕ್ಕೆ ನೇರವಾಗಿ ಬನ್ನಿ ಎಂದು ಸ್ವಾಮೀಜಿಗಳಿಗೆ ಕರೆ ನೀಡಿದ್ದು, ನಾಡಿನ ಸಮಸ್ತ ಮಠಾಧೀಶರಿಗೆ ಮಾಡಿದ ಅಪಮಾನ. ಸಿಎಂ ಆಗಿ ಮೊದಲ ಸುದ್ದಿಗೋಷ್ಟಿಯಲ್ಲಿಯೇ ಈ ರೀತಿಯ ಹೇಳಿಕೆ ನೀಡಬಾರದಿತ್ತು. ಈ ಮೂಲಕ ಉದ್ಧಟತನ ಹಾಗೂ ದುರಹಂಕಾರದ ಪರಮಾವಧಿ ಪ್ರದರ್ಶನ ಮಾಡಿದ್ದೀರಿ. ಮೊದಲು ಸಮಸ್ತ ನಾಡಿನ ಜನತೆಯ ಕ್ಷಮೆ ಕೋರಿ ಅಂತಾ ಯಡಿಯೂರಪ್ಪ ಮಾಧ್ಯಮ ಪ್ರಕಟನೆ ಬಿಡುಗಡೆ ಮಾಡಿದ್ದಾರೆ.
ಡಿಸಿಎಂ ಪರಮೇಶ್ವರ್ ರನ್ನು ನಿರ್ಲಕ್ಷಿಸಿ ಏಕಾಂಗಿಯಾಗಿ ಸುದ್ದಿಗೋಷ್ಠಿ ಮಾಡುವ ಮೂಲಕ ಸರ್ವಾಧಿಕಾರಿ ಧೋರಣೆ ಪ್ರದರ್ಶನ ಮಾಡಿದ್ದೀರಿ. ಮೈತ್ರಿ ಸರ್ಕಾರದ ಆರಂಭದಲ್ಲೇ ನಿಮ್ಮ ಮಿತ್ರ ಪಕ್ಷದಲ್ಲಿ ನಿಮಗೇ ನಂಬಿಕೆ ಇಲ್ಲ ಅನ್ನೋದನ್ನ ತೋರಿಸಿದೀರಿ. ಈ ಪವಿತ್ರ ಮೈತ್ರಿ ಸರ್ಕಾರದಿಂದ ಜನ ಏನು ನಿರೀಕ್ಷೆ ಮಾಡಲು ಸಾಧ್ಯ? ಕಾಂಗ್ರೆಸ್ ನವರಿಗೆ ಒಂದು ಕಿವಿ ಮಾತು, ಕಿಂಚಿತ್ತಾದರೂ ಸ್ವಾಭಿಮಾನ ಇದ್ದರೆ ಈಗಲೇ ಮೈತ್ರಿಯಿಂದ ಹೊರನಡೆಯಿರಿ ಎಂದು ಮಾಧ್ಯಮ ಪ್ರಕಟನೆಯಲ್ಲಿ ಉಲ್ಲೇಖಿಸಲಾಗಿದೆ.
ಹಾಗಾದ್ರೆ ಹೆಚ್ಡಿಕೆ ಹೇಳಿದ್ದೇನು?: ನಿಮಗೆ ಜಾತಿ ವ್ಯಾಮೋಹವಿದ್ರೆ ಅದನ್ನ ನಿಮ್ಮ ಕ್ಷೇತ್ರದಲ್ಲಿ ಇಟ್ಟುಕೊಳ್ಳಿ. ನಾನು ರಾಜಕಾರಣದಲ್ಲಿ ಯಾರನ್ನು ಜಾತಿಯಿಂದ ಗುರುತಿಸಿಲ್ಲ. ಇವತ್ತು ಬೆಳಗ್ಗೆ ಒಬ್ಬ ಹಿರಿಯ ಸ್ವಾಮೀಜಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಬಗ್ಗೆ ಅತ್ಯಂತ ಕೆಟ್ಟದಾಗಿ ಟೀಕಿಸಿದ್ರು. ಹೀಗೆ ಟೀಕೆ ಮಾಡುವವರು ರಾಜಕಾರಣಕ್ಕೆ ಬನ್ನಿ, ಗುರುವಿನ ಸ್ಥಾನದಲ್ಲಿದ್ದವರು ರಾಜಕಾರಣದ ಬಗ್ಗೆ ಟೀಕಿಸಬಾರದು. ನಿಮ್ಮ ಕೆಲಸ ಧರ್ಮದ ಪ್ರಚಾರ, ನಾಡಿನ ಜನತೆಗೆ ಒಳ್ಳೆಯ ಮಾರ್ಗದಲ್ಲಿ ನಡೆಯುವಂತೆ ಆಶೀರ್ವದಿಸಬೇಕು. ನಾನು ಮಠಾಧೀಶರಿಗೆ ಗೌರವ ನೀಡುವವನು. ಈ ರೀತಿಯ ಬಗ್ಗೆ ಮಾತನಾಡುವದರಿಂದ ಜನರು ನಿಮ್ಮ ಬಗ್ಗೆ ಏನು ಯೋಚನೆ ಮಾಡ್ತಾರೆ ಅಂತಾ ತಿಳಿದುಕೊಳ್ಳಿ. ಸ್ವಾಮೀಜಿಗಳು ರಾಜಕೀಯ ಪಕ್ಷಗಳ ಬಗ್ಗೆ ಲಘುವಾಗಿ ಮಾತನಾಡೋದ್ನು ನಿಲ್ಲಿಸಬೇಕು ಎಂದು ಹೇಳಿದ್ದರು.
ಸಿಎಂ ಕುಮಾರಸ್ವಾಮಿಯವರೇ, ಮುಖ್ಯಮಂತ್ರಿಯಾಗಿ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರಿಗೆ 'ರಾಜಕೀಯಕ್ಕೆ ನೇರವಾಗಿ ಬನ್ನಿ' ಎಂದು ಕರೆ ನೀಡುವ ಮೂಲಕ ಉದ್ದಟತನ ಪ್ರದರ್ಶಿಸಿದ್ದೀರಿ. ಇದು ಸಮಸ್ತ ಮಠಾಧೀಶರಿಗೆ ಹಾಗೂ ಸ್ವಾಮೀಜಿಗಳಿಗೆ ತೋರಿರುವ ಅಗೌರವ. ಪರಿಸ್ಥಿತಿ ಕೈಮೀರುವ ಮುನ್ನ ಕ್ಷಮೆಯಾಚಿಸಿ.
— B.S.Yediyurappa (@BSYBJP) May 23, 2018