ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ, ಕರ್ನಾಟಕ ಬಿಜೆಪಿಯ ಹಿರಿಯ ಮುಖಂಡ ಎಚ್.ಎನ್. ಅನಂತಕುಮಾರ್ (59) ನಿಧನರಾಗಿದ್ದು, ಮಾಜಿ ಮುಖ್ಯಂಮತ್ರಿ ಬಿಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸುಮಾರು 30 ವರ್ಷಕ್ಕೂ ಹೆಚ್ಚು ಕಾಲ ನಾನು ಅನಂತ ಕುಮಾರ್ ಸೇರಿ ರಾಜ್ಯದ ಉದ್ದಗಲಕ್ಕೂ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದೆವು. ಪ್ರತಿಯೊಂದು ಸಂದರ್ಭದಲ್ಲಿ ಅವರು ನನ್ನ ಜೊತೆ ಎಲ್ಲಾ ಕಡೆ ಪ್ರವಾಸ ಮಾಡಿ ಇಂದು ಬಿಜೆಪಿ ಪಕ್ಷಕ್ಕೆ ಈ ಮಟ್ಟಕ್ಕೆ ನಿಲ್ಲಲು ಅನಂತ ಕುಮಾರ್ ಅವರ ಕೊಡುಗೆ ಅಪಾರವಾಗಿದೆ ಎಂದರು.
ಕೇಂದ್ರ ಸಚಿವರಾಗಿ ಹಾಗೆಯೇ ಬೇರೆ ಬೇರೆ ಇಲಾಖೆಯ ಸಚಿವರಾಗಿ ಇಡೀ ದೇಶಕ್ಕೆ ಪರಿಚಯವಾಗಿದ್ದಾರೆ. ದಿಢೀರ್ ಅಂತ ಈ ರೀತಿಯ ಕೆಟ್ಟ ಸುದ್ದಿ ನಮಗೆ ಸಿಗಬಹುದು ಎಂದು ಯಾರು ನಿರೀಕ್ಷೆ ಮಾಡಿರಲಿಲ್ಲ. ಈ ಸುದ್ದಿಯಿಂದ ತುಂಬಾ ಆಘಾತಕ್ಕೊಳಗಾಗಿದ್ದೇನೆ. ನಮ್ಮ ನಿರೀಕ್ಷೆಗಳನ್ನು ಮೀರಿ ಇಂತಹ ಘಟನೆಗಳು ನಡೆದುಹೋಗಿದೆ. ಅವರ ಕುಟುಂಬಕ್ಕೆ ಯಾವ ರೀತಿ ಸಾಂತ್ವಾನ ಹೇಳೋದು ಅಂತ ಗೊತ್ತಾಗುತ್ತಿಲ್ಲ. ಇದು ಕೇವಲ ರಾಜ್ಯಕ್ಕಲ್ಲ ಇಡೀ ದೇಶಕ್ಕೆ ಆದಂತಹ ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಅನ್ನೋ ಮೂಲಕ ಅನಂತ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ರು.
ದೇವರು ಇಂತಹ ಪರಿಸ್ಥಿತಿ ಯಾರಿಗೂ ಕೊಡಬಾರದಿತ್ತು. ನಾನು ಅವರು ಎಷ್ಟು ವರ್ಷಗಳ ಕಾಲ ಒಟ್ಟಿಗೆ ಮನೆಯಲ್ಲಿದ್ದೆವು. ಎಲ್ಲಾ ಸಂದರ್ಭಗಳಲ್ಲಿ ಅವರು ನಾನು ಒಟ್ಟಿಗೆ ಇದ್ದಿದ್ದನ್ನು ಇಂದು ನನಗೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಂತ ನೆನಪಿಸಿಕೊಂಡರು.
ಅನಂತ ಕುಮಾರ್ ಅವರ ತೀರ್ಮಾನ ಇಲ್ಲದೇ ನಾನು ಯಾವುದೇ ತೀರ್ಮಾನ ತೆಗೆದುಕೊಳ್ಳುತ್ತಿರಲಿಲ್ಲ. ನಾನು ರಾಜ್ಯದಲ್ಲಿ ಉಪಮುಖ್ಯಮಂತ್ರಿ ಆಗಿದ್ದಾಗ ಸಂದರ್ಭದಲ್ಲಿ ಅವರು ಹಣಕಾಸು ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಅವರು ಒತ್ತಾಯ ಮಾಡಿ ಉಪಮುಖ್ಯಮಂತ್ರಿ ಆಗಲೇ ಬೇಕು ಅಂತ ಹೇಳಿದ್ದರು. ಅವರು ದೇಶದ ಹಾಗೂ ರಾಜ್ಯದ ಮಾಜಿ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿದವರಾಗಿದ್ದರು ಎಂದರು.
ಅವರ ಮದುವೆ ಸಂದರ್ಭದಲ್ಲಿ ನಾವು ಮುಂದೆ ನಿಂತು ಮದುವೆ ಮಾಡಿದ್ವಿ. ನಾನು ಶಾಸಕನಾಗಿದ್ದ ಸಂದರ್ಭದಲ್ಲೂ ಅವರು ನನಗೆ ಬೆನ್ನೆಲುಬಾಗಿದ್ದರು. ಇಂದು ನನ್ನ ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಅವರ ಕೊಡುಗೆ ಇಲ್ಲದೇ ಇರುತ್ತಿದ್ದರೆ ಇಂದು ಪಕ್ಷವನ್ನು ಬಲಪಡಿಸಲು ಸಾಧ್ಯವಾಗಿತ್ತಿರಲಿಲ್ಲ. ಒಟ್ಟಿನಲ್ಲಿ ಅನಂತಕುಮಾರ್ ಅವರ ಕೊಡುಗೆ ಬಿಜೆಪಿಗೆ ಅಪಾರವಾಗಿತ್ತು ಎಂದು ಬಿಎಸ್ವೈ ಹೇಳಿದರು.
ಅನಂತಕುಮಾರ್ ಅವರ ನಿಧನವು ಪಕ್ಷಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ಆದ ಭಾರೀ ನಷ್ಟ. ಅವರನ್ನು ಕಳೆದುಕೊಂಡು ಪಕ್ಷ,ನಾಡು,ದೇಶ ಬಡವಾಗಿದೆ. ಪ್ರತೀನಿತ್ಯ ಪಕ್ಷದ ಸಂಘಟನೆಯನ್ನು ಬೆಳೆಸಲು ನಾವು ಸಮಾಲೋಚನೆ ಮಾಡುತ್ತಿದ್ದುದನ್ನು ಮರೆಯಲಾಗದು. ರಾಜಕೀಯ ವಾಗಿ ಬಹಳ ಬೇಗ ಉನ್ನತ ಸ್ಥಾನದವರೆಗೂ ಏರಿದ ಅವರು ರಾಜಕೀಯವಾಗಿ ಬಹಳಷ್ಟು ಕ್ಲಿಷ್ಟ ಸಂದರ್ಭಗಳಲ್ಲಿ ಉತ್ತಮ ಸಲಹೆಗಳನ್ನು ನೀಡಿ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದರು. ಒಮ್ಮೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿಯೂ ಅವರು ಪಕ್ಷದ ಬೆಳವಣಿಗೆಗೆ ಕಾರಣರಾಗಿದ್ದ ಅನಂತಕುಮಾರ್ ಅವರ ಕೊಡುಗೆಯನ್ನು ಮರೆಯಲಾಗದು ಎಂದು ಯಡಿಯೂರಪ್ಪ ನೆನಪು ಮಾಡಿಕೊಂಡರು.
https://twitter.com/BSYBJP/status/1061799568126304256
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews
https://www.youtube.com/watch?v=Xe5uJiq9Y18