ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಯಾವ ಕ್ಷೇತ್ರದಿಂದ ಸ್ಪರ್ಧಿಸ್ತಾರೆ ಎನ್ನುವುದು ಇನ್ನು ಕಗ್ಗಂಟಾಗೇ ಉಳಿದಿದೆ. ಖುದ್ದು ಗೌಡರೇ ಈ ವಿಚಾರದಲ್ಲಿ ಗೊಂದಲದಲ್ಲಿದ್ದು, ಯಾವ ಕ್ಷೇತ್ರದಿಂದ ಸ್ಪಧಿಸಿದರೆ ಉತ್ತಮ ಎನ್ನುವ ಚಿಂತೆ ಕಾಡುತ್ತಿದೆ ಎನ್ನಲಾಗುತ್ತಿದೆ.
ಇದೀಗ ದೇವೇಗೌಡರ ಶಿಷ್ಯ ಎಂದೇ ಕರೆಸಿಕೊಳ್ಳುವ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಗುರುವಿಗೆ ಈ ವಿಚಾರವಾಗಿ ಟಿಪ್ಸ್ ನೀಡಿದ್ದಾರೆ. ನೀವು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದರೆ, ಗೆಲುವು ಸುಲಭವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್ ನ 5 ಜನ ಹಾಗೂ ಜೆಡಿಎಸ್ ನ ಇಬ್ಬರು ಶಾಸಕರಿದ್ದಾರೆ. ಹೀಗಾಗಿ ಎರಡು ಪಕ್ಷದವರು ಸೇರಿ ಒಟ್ಟಿಗೆ ಕೆಲಸ ಮಾಡಿದರೆ ಗೆಲ್ಲುವುದು ಗ್ಯಾರಂಟಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ ತುಮಕೂರಿನಲ್ಲೂ ನೀವು ಗೆಲ್ಲಬಹುದು ಆದರೆ ಅಲ್ಲಿ ಬೇರೊಬ್ಬ ಅಭ್ಯರ್ಥಿ ಹಾಕಿದರು ಗೆಲ್ತಾರೆ. ಆದರೆ ಬೆಂಗಳೂರು ಉತ್ತರದಲ್ಲಿ ಅಭ್ಯರ್ಥಿಗಳ ಕೊರತೆ ಇರುವುದರಿಂದ ನೀವು ಸ್ಪರ್ಧಿಸಿದರೆ ಉತ್ತಮ ಎಂದು ಸಿದ್ದರಾಮಯ್ಯ ದೇವೇಗೌಡರಿಗೆ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಈ ವಿಷಯದ ಬಗ್ಗೆ ದೇವೇಗೌಡರು ಸಹ ಯೋಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.