ಬೆಂಗಳೂರು: ಲೋಕಸಭಾ ಚುನಾವಣಾ ದಿನದ ಆಸುಪಾಸಿನಲ್ಲಿ ಸಾಲು ಸಾಲು ರಜೆಗಳಿದ್ದು, ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡಿರುವ ಮತದಾರರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಮನವಿ ಮಾಡಿದ್ದಾರೆ.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತದಾನ ಮಾಡುವುದು ನಮ್ಮೆಲ್ಲರ ಪ್ರಮುಖ ಹಕ್ಕು. ಹಾಗಾಗಿ ನಗರ ಪ್ರದೇಶಗಳ ಜನ ಮತಗಟ್ಟೆಗೆ ತೆರಳಿ ಮತ ಹಾಕಿ ಎಂದು ನಾನು ಮನವಿ ಮಾಡಿಕೊಂಡರು.
ನರೇಂದ್ರ ಮೋದಿಯವರು ಸ್ಥಿರವಾದ ಸರ್ಕಾರ ಕೊಟ್ಟಿದ್ದಾರೆ. ಹೀಗಾಗಿ ನಿಮ್ಮ ಮತಗಳನ್ನು ನರೇಂದ್ರ ಮೋದಿಗೆ ಹಾಕಿ. ಈ ಹಿಂದಿನ ಸರ್ಕಾರಗಳಲ್ಲಿ ಸ್ಥಿರತೆ ಇದ್ದರೂ ರಿಮೋಟ್ ಕಂಟ್ರೋಲ್ ಇರುತಿತ್ತು. ಆದ್ರೆ ಮೋದಿ ಸರ್ಕಾರದಲ್ಲಿ ರಿಮೋಟ್ ಕಂಟ್ರೋಲ್ ಇರಲಿಲ್ಲ. ಈ ಚುನಾವಣೆ ದೇಶದ ದೃಷ್ಟಿಯಿಂದಷ್ಟೇ ಅಲ್ಲ. ವಿಶ್ವದ ಗಮನ ಸೆಳೆದಿರುವ ಚುನಾವಣೆಯಾಗಿದೆ. ಜನಭರಿತ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದು ಎಂದು ಹೇಳಿದರು.
ರಫೆಲ್ ವಿಚಾರದಲ್ಲಿ ಏನ್ ಆಯ್ತು? ಕಾಂಗ್ರೆಸ್ ಅಧ್ಯಕ್ಷರ ಅಪ್ರಬುದ್ಧ ನಡವಳಿಕೆಯಿಂದ ಸುಪ್ರೀಂಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 145 ವರ್ಷಗಳ ಇತಿಹಾಸ ಇರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಲೋಚನೆ ಮಾಡಿ ಪ್ರತಿಕ್ರಿಯೆ ಕೊಡಬೇಕು. ಆದ್ರೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರದ್ದು ಅಪ್ರಬುದ್ಧತೆ, ಅನ್ ಲಿಮಿಟೆಡ್ ಆಗಿದೆ. ಸುಪ್ರೀಂಕೋರ್ಟ್ ನಲ್ಲಿ ಏನ್ ಹೇಳ್ತಾರೆ ನೋಡೋಣ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ಹವ್ಯಾಸಿ ಪ್ರಿಯ ಪ್ರಧಾನ ಮಂತ್ರಿಗಳು ಇರುತ್ತಾರೆ. ನರೇಂದ್ರ ಮೋದಿಗೆ ಹವ್ಯಾಸಗಳು ಇಲ್ಲ. ಅಲ್ಲದೇ ಅವರಿಗೆ ಮಕ್ಕಳು, ಮೊಮ್ಮಕ್ಕಳ ಬಗ್ಗೆ ಚಿಂತೆ ಇಲ್ಲ. ಅವರಿಗೆ ಸಹೋದರ ಇದ್ದರೂ ನಗಣ್ಯ. ಶಾಸ್ತ್ರಿಗಳ ನಂತರ ನಾನು ಹಲವಾರು ಪ್ರಧಾನಿಗಳನ್ನ ನೋಡಿದ್ದೇನೆ. 18 ಗಂಟೆಗಳ ಕಾಲ ಕೆಲಸ ಮಾಡುವ ಮೋಸ್ಟ್ ಹಾರ್ಡ್ ವರ್ಕಿಂಗ್ ಪಿಎಂ ನರೇಂದ್ರ ಮೋದಿ ಎಂದು ಕೊಂಡಾಡಿದರು.