– ಡಿ.ಕೆ.ರವಿ ಸ್ವಲ್ಪ ಮಟ್ಟಿನ ಪ್ರಚಾರ ಪ್ರಿಯರಾಗಿದ್ರು
– ಸ್ವಲ್ಪ ಸಮಯದಲ್ಲೇ ಜನಪ್ರಿಯತೆ ಗಳಿಸಿಕೊಂಡಿದ್ರು
ಬೆಂಗಳೂರು: ದಿ. ಐಎಎಸ್ ಅಧಿಕಾರಿ ಡಿಕೆ ರವಿ ಸ್ವಲ್ಪ ಮಟ್ಟಿನ ಪ್ರಚಾರ ಪ್ರಿಯರಾಗಿದ್ದರು. ಸ್ವಲ್ಪ ಸಮಯದಲ್ಲೇ ಜನಪ್ರಿಯತೆಯನ್ನು ಬೆಳೆಸಿಕೊಂಡರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಸ್ಕೌಟ್ಸ್ ಹಾಗೂ ಗೈಡ್ಸ್ ಸಭಾಂಗಣದಲ್ಲಿ ಹಿರಿಯ ಪತ್ರಕರ್ತರಾದ ರಾಮಕೃಷ್ಣ ಉಪಾಧ್ಯಯರಿಂದ ರಚಿತವಾಗಿ ಅನು ಪ್ರಕಾಶ ಹೊರತಂದಿರುವ “ನಗ್ನ ಸತ್ಯ ಹಾಗೂ Land, Lust & Audiotapes” ಪುಸ್ತಕಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ತಮ್ಮ ದುಡುಕಿನ ಹಲವಾರು ನಿರ್ಧಾರಗಳಿಂದ ಡಿಕೆ ರವಿ ಅವರು ಆತ್ಮಹತ್ಯೆಯಂತಹ ಕ್ರಮಕ್ಕೆ ಮುಂದಾದರು ಎನ್ನುವುದು ಎಲ್ಲಾ ತನಿಖೆಗಳಲ್ಲೂ ಸಾಬೀತಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಯವ ಐಎಎಸ್ ಅಧಿಕಾರಿಯಾಗಿದ್ದ ಡಿ.ಕೆ ರವಿಕುಮಾರ್ ಅವರು ಆತ್ಮಹತ್ಯೆ ಮಾಡಿಕೊಂಡಂತಹ ಸಂದರ್ಭದಲ್ಲಿ ವಿಧಾನಸಭೆಯ ಅಧಿವೇಶನ ನಡೆಯುತ್ತಿತ್ತು. ಈ ಪ್ರಕರಣದ ಮೂಲಕ ನನ್ನ ನೇತೃತ್ವದ ಸರ್ಕಾರಕ್ಕೆ ಕಳಂಕ ತರುವ ಪ್ರಯತ್ನವನ್ನು ವಿರೋಧ ಪಕ್ಷಗಳು ಮಾಡಿದವು. ಆದರೆ ಈ ಪ್ರಕರಣಕ್ಕೂ ಹಾಗೂ ನಮ್ಮ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲದೇ ಇದ್ದ ಕಾರಣ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎನ್ನುವ ಉದ್ದೇಶದಿಂದ ಸಿಬಿಐ ತನಿಖೆಗೆ ವಹಿಸಲಾಯಿತು. ಒಂದು ವಾರದೊಳಗೆ ನಡೆದಂತಹ ಘಟನೆಗಳು ಆಗಿನ ಗೃಹ ಸಚಿವರಾಗಿದ್ದ ಕೆ.ಜೆ ಜಾರ್ಜ್ ಅವರ ಮೇಲೆ ಕಳಂಕ ತರಲು ಪ್ರಯತ್ನ ನಡೆಯಿತು ಎಂದರು. ಇದನ್ನೂ ಓದಿ: ಕಾಂಗ್ರೆಸ್ ನಿಂದ ಅಸಂಬದ್ಧ ಸುಳ್ಳು ಹೇಳಿಕೆ- ಅಮರೀಂದರ್ ಸಿಂಗ್
ಮೂಲತಃ ಮಹತ್ವಾಕಾಂಕ್ಷಿ ಆಗಿದ್ದ ಡಿ.ಕೆ ರವಿ, ತಾವು ಅಧಿಕಾರಿಯಾಗಿದ್ದ ಸಂದರ್ಭದಲ್ಲಿಯೇ ಹೊಸದೊಂದು ವ್ಯಾಪಾರಕ್ಕೆ ಮುಂದಾಗಿದ್ದರು. ಅಲ್ಲದೆ ಈ ಪ್ರಕರಣದ ತನಿಖೆಯನ್ನು ಸಿಓಡಿ ಒಳ್ಳೆಯ ರೀತಿಯಲ್ಲಿ ನಡೆಸಿತ್ತು. ಈ ಎಲ್ಲಾ ವಿಚಾರಗಳ ಬಗ್ಗೆ ಸಿಬಿಐ ತನ್ನ ವರದಿಯಲ್ಲಿ ವಿಸ್ತ್ರುತವಾಗಿ ತಿಳಿಸಿದೆ. ನಾವು ನಮ್ಮ ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇರುವ ದೃಷ್ಟಿಯಿಂದ ತನಿಖೆಗೆ ಆದೇಶ ನೀಡಿದ್ದೆವು. ಅಪ್ರಾಮಾಣಿಕ ರಾಜಕಾರಣ ಮಾಡುವಲ್ಲಿ ನಿಸ್ಸೀಮರಾಗಿರುವ ಬಿಜೆಪಿಯವರು ತಾವೇ ಆರೋಪಿಸುತ್ತಿದ್ದ ಸಂಸ್ಥೆಗೆ ಈ ಪ್ರಕರಣವನ್ನು ವಹಿಸುವಂತೆ ಆಗ್ರಹಿಸಿದ್ದರು ಎಮದು ಹೇಳಿದರು. ಇದನ್ನೂ ಓದಿ: ಅಂಡರ್ವಾಟರ್ನಲ್ಲಿ ಚಿನ್ನದ ಹುಡುಗ- ವೀಡಿಯೋ ನೋಡಿ
ನನ್ನ ಅಧಿಕಾರಾವಧಿಯಲ್ಲಿ ಸುಮಾರು 5 ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೇವೆ. ಆದರೆ ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಒಂದೇ ಒಂದು ಪ್ರಕರಣವನ್ನೂ ನೀಡುವ ಧೈರ್ಯ ಮಾಡಿಲ್ಲ ಎಂದು ಕುಟುಕಿದರು. ಯುವ ಅಧಿಕಾರಿಯಾಗಿ, ಸ್ವಲ್ಪ ಮಟ್ಟಿನ ಪ್ರಚಾರ ಪ್ರಿಯರಾಗಿದ್ದ ಅವರು ಸ್ವಲ್ಪ ಸಮಯದಲ್ಲೇ ಜನಪ್ರಿಯತೆಯನ್ನು ಬೆಳೆಸಿಕೊಂಡರು. ಆದರೆ ತಮ್ಮ ದುಡುಕಿನ ಹಲವಾರು ನಿರ್ಧಾರಗಳಿಂದ ಆತ್ಮಹತ್ಯೆಯಂತಹ ಕ್ರಮಕ್ಕೆ ಮುಂದಾದರು ಎನ್ನುವುದು ಎಲ್ಲಾ ತನಿಖೆಗಳಲ್ಲೂ ಸಾಬೀತಾಗಿದೆ. ಈ ವರದಿಗಳ ಬಗ್ಗೆ ಹಾಗೂ ಆದ ಘಟನೆಗಳ ಬಗ್ಗೆ ಜನರಿಗೆ ಅರಿವು ಇದ್ದಿದ್ದರಿಂದ ತಾವು ಸಿಬಿಐ ವರದಿಯನ್ನು ಸದನದ ಮುಂದೆ ಇಡಲಿಲ್ಲ ಎಂದು ಹೇಳಿದರು.
ನಾವು ನಮ್ಮ ಅಧಿಕಾರಾವಧಿಯಲ್ಲಿ ಸಾಧ್ಯವಾದಷ್ಟು ಪಾರದರ್ಶಕ ಹಾಗೂ ಪ್ರಾಮಾಣಿಕತೆಯ ಕಾರ್ಯವನ್ನು ಮಾಡಿದ್ದೇವೆ. ಈಗ ಪರಿಸ್ಥಿತಿಯೇ ಬದಲಾಗಿದೆ. ಎಲ್ಲ ಕಡೆ ಭ್ರಷ್ಟತೆ, ಜಾತಿಯ ಮೇಲಿನ ವ್ಯಾಮೋಹ ಹಾಗೂ ಚುನಾವಣೆಯಲ್ಲಿ ಹಣಬಲ ಹಾಸುಹೋಕ್ಕಾಗಿದೆ. ಇದಕ್ಕೆ ನಾವೆಲ್ಲರೂ ಕಾರಣಕರ್ತರು. ಆಡಳಿತದಲ್ಲಿ ಪ್ರಾಮಾಣಿಕ ಅಧಿಕಾರಿಗಳೂ ಇದ್ದಾರೆ ಹಾಗೆಯೇ ಭ್ರಷ್ಟ ಅಧಿಕಾರಿಗಳೂ ಇದ್ದಾರೆ. ಅದೇ ರೀತಿ ಜನಪ್ರತಿನಿಧಿಗಳೂ ಕೂಡಾ. ಈ ವ್ಯವಸ್ಥೆಯನ್ನು ಸರಿಪಡಿಸುವ ಶಕ್ತಿ ಸಮಾಜಕ್ಕೆ ಬರಬೇಕು. ಆಗ ಮಾತ್ರ ನಾವು ಈ ಭ್ರಷ್ಟ ವ್ಯವಸ್ಥೆಯನ್ನು ಹೊಡೆದೋಡಿಸಲು ಸಾಧ್ಯ ಎಂದರು.