– ಸಿಎಂ ವಿರುದ್ಧ ಸಂತ್ರಸ್ತರ ದೂರು
– ಸದನದಲ್ಲಿ ಚರ್ಚೆ ಮಾಡುತ್ತೇನೆ ಎಂದ ಸಿದ್ದರಾಮಯ್ಯ
ಚಿಕ್ಕಮಗಳೂರು: ರಸ್ತೆ ಬದಿಯಲ್ಲಿ ನಿಂತಿದ್ದ ಸಂತ್ರಸ್ತರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿಸಿ ಮಾನವೀಯತೆ ಮೆರೆದಿದ್ದಾರೆ. ಆದರೆ ಈ ಹಿಂದೆ ಇದೇ ಸ್ಥಳಕ್ಕೆ ಭೇಟಿ ನೀಡಿದ್ದ ಬಿಎಸ್ವೈ ರಸ್ತೆ ಪಕ್ಕ ಸಂತ್ರಸ್ತರು ನಿಂತಿದ್ದರೂ ಸಹ ಹಾಗೇ ಹೋಗಿದ್ದರು ಎಂದು ಗ್ರಾಮಸ್ಥರು ದೂರಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿಯ ರಸ್ತೆ ಬದಿ ನಿಂತಿದ್ದ ಗ್ರಾಮಸ್ಥರನ್ನು ಸಿದ್ದರಾಮಯ್ಯ ಮಾತನಾಡಿಸಿದ್ದಾರೆ. ಸಂತ್ರಸ್ತರನ್ನು ಕಂಡ ಸಿದ್ದರಾಮಯ್ಯ ಕಾರನ್ನು ನಿಲ್ಲಿಸಿ ಸಂತ್ರಸ್ತರ ಅಹವಾಲು ಆಲಿಸಿದ್ದಾರೆ. ಈ ವೇಳೆ ಸಂತ್ರಸ್ತರು ತಮ್ಮ ಕಷ್ಟ-ನಷ್ಟವನ್ನು ಹೇಳಿಕೊಂಡಿದ್ದಾರೆ. ಸಂತ್ರಸ್ತರನ್ನು ಮಾತನಾಡಿಸಿದ ಅನಂತರ ಈ ಕುರಿತು ವಿಧಾನಸಭೆಯಲ್ಲಿ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಸಂತ್ರಸ್ತರಿಗೆ ಭರವಸೆ ನೀಡಿದ್ದಾರೆ.
ಈ ಹಿಂದೆ ನೆರೆ ವೀಕ್ಷಣೆಗೆ ಮೂಡಿಗೆರೆಗೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಸ್ತೆ ಬದಿ ನಿರಾಶ್ರಿತರು ನಿಂತಿದ್ದರೂ ಸಹ ಅವರನ್ನು ಮಾತನಾಡಿಸದೆ ಹಾಗೆ ತೆರಳಿದ್ದರು. ಆದರೆ ಬಿದರಹಳ್ಳಿ ನಿರಾಶ್ರಿತರು ಸಿಎಂ ಬಿಎಸ್ವೈಗಾಗಿ ಕಾದು ನಿಂತಿದ್ದರು. ಇದಾವುದನ್ನು ಗಮನಿಸದ ಬಿಎಸ್ವೈ ಕಾರಿನಲ್ಲಿ ಹಾಗೇ ತೆರಳಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಧಿವೇಶನದಲ್ಲಿ ದೃಶ್ಯ ಮಾಧ್ಯಮ ನಿರ್ಬಂಧಕ್ಕೆ ಬಿಜೆಪಿ ಚಿಂತನೆ ಕುರಿತು ಕಳಸದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಹಳಷ್ಟು ಮಾಧ್ಯಮಗಳು ಬಿಜೆಪಿ ಪರವಾಗಿ ಕೆಲಸ ಮಾಡಿದ್ದವು ಹೀಗಾಗಿ ಅಧಿವೇಶನದಲ್ಲಿ ಮಾಧ್ಯಮಗಳಿಗೆ ನಿಷೇಧ ಹೇರಲು ಹೊರಟಿದ್ದಾರೆ. ನಾಮ್ಮ ಸರ್ಕಾರ ಇದ್ದಾಗ ನಿರ್ಬಂಧ ಹೇರಲು ಚಿಂತಿಸಿರಲಿಲ್ಲ. ಸರ್ಕಾರದ್ದೇ ಚಾನಲ್ ಮಾಡಲು ಚಿಂತನೆ ಮಾಡಿದ್ದೆವು. ನಿರ್ಬಂಧ ಹೇರಲು ನಾವು ಹೊರಟಿರಲಿಲ್ಲ. ಬಹಳ ಮಾಧ್ಯಮಗಳು ಬಿಜೆಪಿಯವರ ಪರ ಇದ್ದವು, ಹೀಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.