ಮೈಸೂರು: ಬಿಜೆಪಿ ಭ್ರಷ್ಟಾಚಾರದ ಹಣದಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಕರ್ನಾಟಕದ ಬಿಜೆಪಿಯ ಚಾಳಿ ದೇಶಕ್ಕೆ ಹಬ್ಬಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಮಹಾರಾಷ್ಟ್ರದ ಸರ್ಕಾರ ಪತನ ವಿಚಾರ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಭ್ರಷ್ಟಾಚಾರದ ಹಣದಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗಿದೆ. ಕರ್ನಾಟಕದ ಬಿಜೆಪಿಯ ಚಾಳಿ ದೇಶಕ್ಕೆ ಹಬ್ಬಿಸಿದ್ದಾರೆ. ಇದನ್ನು ತಡೆಗಟ್ಟಲು ಪಕ್ಷಾಂತರ ಕಾಯ್ದೆ ತಿದ್ದುಪಡಿ ಆಗಬೇಕು ಎಂದರು.
ಒಂದು ಪಕ್ಷದಿಂದ ಆಯ್ಕೆಯಾದವನು ಬೇರೆ ಸ್ಥಾನಕ್ಕೆ ಹೋಗದಂತೆ ತಡೆಯಬೇಕು. ಹೋದರೆ 10 ವರ್ಷ ಆತ ಚುನಾವಣೆಗೆ ನಿಲ್ಲದಂತೆ ಆದೇಶ ಮಾಡಬೇಕು. ಪ್ರಜಾಪ್ರಭುತ್ವದ ಉಳಿವಿಗೆ ಇದರ ಅವಶ್ಯಕತೆ ಇದೆ. ಆಪರೇಷನ್ ಕಮಲ ಹುಟ್ಟು ಹಾಕಿದ್ದೇ ಬಿಜೆಪಿಯವರು. 2008ರಲ್ಲಿ ಯಡಿಯೂರಪ್ಪ ಮೊದಲ ಆಪರೇಷನ್ ಕಮಲ ಮಾಡಿದರು. ಎಲ್ಲೂ ಅವರಿಗೆ ಬಹುಮತ ಬಂದಿಲ್ಲ. ಎಲ್ಲಾ ಕಡೆ ಹಣ ಕೊಟ್ಟಿ ಶಾಸಕರನ್ನು ಖರೀದಿಸಿ ಸರ್ಕಾರ ಮಾಡಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಮಹಿಳೆ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಸಾಮಾಜಿಕ ನ್ಯಾಯ ಅಲ್ಲ ವಿಶೇಷವೂ ಅಲ್ಲ. ಆ ರೀತಿ ಇದ್ದರೆ ಆರ್ ಎಸ್ ಎಸ್ ಮುಖ್ಯ ಸಹಸಂಚಾಲಕರಾಗಿ ಆಯ್ಕೆ ಮಾಡಲಿ. ಮೋಹನ್ ಭಾಗವತ್ ಸ್ಥಾನಕ್ಕೆ ಇಂತಹ ಮಹಿಳೆಯನ್ನು ತರಲಿ ಎಂದರು. ಇದನ್ನೂ ಓದಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ತಾಯಿ-ಇಬ್ಬರು ಮಕ್ಕಳ ತ್ರಿವಳಿ ಕೊಲೆ; ಸಾಕ್ಷಿಗಳ ಕೊರತೆ ಆರೋಪಿ ನಿರ್ದೋಷಿ
ಆಕೆ ಬಿಜೆಪಿಯವರೇ ಆಗಿದ್ದಾರೆ. ರಾಜ್ಯಪಾಲರು ಸೇರಿ ಹಲವು ಹುದ್ದೆ ಅಲಂಕರಿಸಿದ್ದಾರೆ. ರಾಷ್ಟ್ರಪತಿಯಾಗಿ ಅಂತಹ ಕೆಲಸ ಮಾಡಲು ಇವರು ಬಿಡಲ್ಲ. ಹಿಂದೆ ರಾಜೇಂದ್ರ ಪ್ರಸಾದ್ ಅವರು ಮಾಡಿದಂತೆ ಕೆಲಸ ಮಾಡಲು ಆಗುತ್ತಾ..?. ರಾಮನಾಥ್ ಕೋವಿಂದ್ ಕೂಡ ರಾಷ್ಟ್ರಪತಿ ಆಗಿದ್ದರು. ಅವರು ಏನು ಮಾಡಿದರು? ಇದು ಅವರಂತೆ ನಾಮಕವಾಸ್ತೆಗೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ ವಿಚಾರ ಸಂಬಂಧ ಮೋದಿ ಹೇಳಿದ ಡಬಲ್ ಇಂಜಿನ್ ಸರ್ಕಾರದ ಹೇಳಿಕೆಗೆ ತಿರುಗೇಟು ನೀಡಿದರು. ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ..?. ಅದು ಮಾಡಿರುವ ಅಭಿವೃದ್ಧಿ ಕಾರ್ಯದ ಪಟ್ಟಿ ಕೊಡಿ. ಸುಮ್ಮನೇ ಸುಳ್ಳು ಹೇಳಿ ಮೋದಿ ಹೋಗಿದ್ದಾರೆ. ರಾಜ್ಯ ಸರ್ಕಾರ ಮೋದಿಗೆ ರಾಜ್ಯದ ಬೇಡಿಕೆ ಬಗ್ಗೆ ಮನವಿ ನೀಡದ ವಿಚಾರದ ಕುರಿತು ಮಾತನಾಡಿ, ಮೋದಿ ಏನೂ ಮಾಡುವುದಿಲ್ಲ ಅನ್ನೋದು ರಾಜ್ಯ ನಾಯಕರಿಗೆ ಗೊತ್ತಿದೆ. ಅದಕ್ಕೆ ಅವರು ಯಾವುದೇ ಮನವಿ ನೀಡಿಲ್ಲ. ಮೋದಿ ಕಾರ್ಯಕ್ರಮಕ್ಕೆ 25 ಕೋಟಿಗಿಂತ ಹೆಚ್ಚು ಖರ್ಚು ಮಾಡಲಾಗಿದೆ ಎಂದರು.
ಇದೇ ವೇಳೆ ರಮೇಶ್ ಜಾರಕಿಹೋಳಿ ಪ್ರಕರಣ ಮತ್ತೆ ಸಿಬಿಐಗೆ ವಹಿಸಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಸತ್ಯ ಗೊತ್ತಿಲ್ಲದೆ ನಾನು ಮಾತನಾಡುವುದಿಲ್ಲ. ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ವಿಚಾರದ ಕುರಿತು ಪ್ರತಿಕ್ರಿಯಿಸಿ, ಬೇರೆ ಪಕ್ಷದ ಶಾಸಕನ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಹೋಗಿ ಅವರು ಮೈಸೂರಿನಲ್ಲೇ ಇದ್ದಾರೆ ಅವರನ್ನೇ ಕೇಳಿ. ನನ್ನನ್ನು ಏಕೆ ಕೇಳುತ್ತೀರಿ ಎಂದು ಜಿಟಿ ವಿಚಾರ ಕೇಳಿದಕ್ಕೆ ಸಿದ್ದರಾಮಯ್ಯ ಗರಂ ಆದರು.
Live Tv