ಮಂಗಳೂರು: ನೀರಿನ ವಿಚಾರದಲ್ಲಿ ಕಾಲು ಕೆರೆದು ಜಗಳಕ್ಕೆ ಬಂದಿದ್ದ ಪಕ್ಕದ ರಾಜ್ಯ ಗೋವಾ, ಇದೀಗ ಮೀನಿನ ವಿಚಾರದಲ್ಲಿಯೂ ಕಾಲು ಕೆರೆದುಕೊಂಡಿದೆ. ಮೀನಿನಲ್ಲಿ ಕೆಮಿಕಲ್ ಇದೆಯೆಂಬ ವದಂತಿಯನ್ನೇ ನಂಬಿ ಕರ್ನಾಟಕದ ಕರಾವಳಿಯಿಂದ ಗೋವಾಕ್ಕೆ ಪೂರೈಕೆ ಆಗ್ತಿದ್ದ ಮೀನುಗಳಿಗೆ ನಿಷೇಧದ ಬರೆ ಹಾಕಿದೆ. ಇದರಿಂದಾಗಿ ಕರಾವಳಿಯ ಮೀನುಗಾರಿಕೆಗೆ ದೊಡ್ಡ ಸಂಕಷ್ಟ ಎದುರಾಗಿದೆ.
ಕರ್ನಾಟಕದ ಕರಾವಳಿಯಲ್ಲಿ ಮೀನುಗಾರಿಕೆಯೇ ದೊಡ್ಡ ಉದ್ಯಮ. ಕರಾವಳಿ ಭಾಗದ ಸಾವಿರಾರು ಕುಟುಂಬಗಳ ಜೀವನ ನಿರ್ವಹಣೆಯ ಮೂಲವೇ ಮೀನುಗಾರಿಕೆ. ಆದ್ರೆ ಕರ್ನಾಟಕದಿಂದ ಪೂರೈಕೆಯಾಗುವ ಮೀನುಗಳಿಗೆ ರಾಸಾಯನಿಕ ಬಳಸ್ತಾರೆಂಬ ವದಂತಿಯಿಂದಾಗಿ ಗೋವಾ ಸರಕಾರ ಕರಾವಳಿ ಮೀನುಗಳಿಗೆ ನಿಷೇಧ ಹೇರಿವೆ. ಜೊತೆಗೆ ಮೀನು ಕೆಡದಂತೆ ಬಳಸುವ ಪಾಮೋಲಿನ್ ಬಳಕೆಯನ್ನು ಪತ್ತೆ ಹಚ್ಚುವ ಯಂತ್ರವನ್ನು ಸ್ಥಾಪಿಸಲಾಗ್ತಿದ್ದು, ಅಲ್ಲಿವರೆಗೆ ನಿಷೇಧ ಮುಂದುವರೆಯಲಿದೆ ಎಂದಿದೆ. ಇದ್ರಿಂದ ಕಳೆದ 15 ದಿನಗಳಿಂದ ಮೀನು ಪೂರೈಕೆ ಸ್ಥಗಿತಗೊಂಡಿದ್ದು, ಮೀನಿನ ದರವೂ ಒಂದೇ ವಾರದಲ್ಲಿ ಇಳಿಕೆಯಾಗಿದೆ ಅಂತ ಮೀನುಗಾರಿಕಾ ಮುಖಂಡ ರಾಜರತ್ನ ಸನಿಲ್ ತಿಳಿಸಿದ್ದಾರೆ.
ದಿನಂಪ್ರತಿ ಬಳಸುವ ಬಂಗುಡೆ ಮೀನು ಕೆಜಿಗೆ 180 ರಿಂದ 90 ರೂಪಾಯಿ ಇಳಿಕೆ ಕಂಡಿದೆ. ಇದರಿಂದ ಕಾರವಾರ, ಉಡುಪಿ ಜಿಲ್ಲೆಗಳಲ್ಲಿ ಮೀನುಗಾರರು ಪ್ರತಿಭಟಿಸುತ್ತಿದ್ದಾರೆ. ಆದ್ರೆ ಸಮಸ್ಯೆ ಮಾತ್ರ ಪರಿಹಾರ ಕಂಡಿಲ್ಲ. ಇನ್ನು ಈ ಬಗ್ಗೆ ಸಿಎಂ ಜೊತೆ ಚರ್ಚಿಸುವುದಾಗಿ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಮೀನುಗಾರಿಕೆಗೆ ಬಿದ್ದ ಹೊಡೆತದಿಂದ ಹಲವು ಕುಟುಂಬಗಳ ಜೀವನ ನಿರ್ವಹಣೆ ಕಷ್ಟವಾಗಿದೆ. ಇಷ್ಟಾದ್ರೂ ಗೋವಾ ಸರ್ಕಾರದ ಜೊತೆ ಮಾತುಕತೆ ನಡೆಸದ ರಾಜ್ಯ ಸರ್ಕಾರಕ್ಕೆ ಹಿಡಿಶಾಪ ಹಾಕ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews