ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಇತ್ತೀಚೆಗೆ ದುಷ್ಕರ್ಮಿಗಳ ವಿರುದ್ಧ ತೆಗೆದುಕೊಳ್ಳುವ ನಿರ್ಧಾರಗಳು ಅವರ ನಿದ್ದೆಯನ್ನೇ ಕೆಡಿಸಿ ಬಿಟ್ಟಿದೆ. ಎಲ್ಲಿ ತಪ್ಪು ಮಾಡಿ ಸಿಕ್ಕಿ ಬಿದ್ದ ಮೇಲೆ ತಮ್ಮ ಆಸ್ತಿಗಳ ಮೇಲೆ ಬುಲ್ಡೋಜರ್ ಹತ್ತಿಸುತ್ತಾರೋ ಎಂಬ ಭಯ ಶುರುವಾಗಿದೆ. ಅಂತೆಯೇ ಅದೆಷ್ಟೋ ಜನರು ತಪ್ಪು ಮಾಡಿ, ಬಳಿಕ ಯೋಗಿ ಸರ್ಕಾರದ ಭಯಕ್ಕೆ ಪೊಲೀಸ್ ಠಾಣೆಗೆ ಹೋಗಿ ತಾವೇ ಶರಣಾಗಿದ್ದು ಇದೆ.
ಇದೇ ರೀತಿ ಮತ್ತೊಂದು ಘಟನೆ ನಡೆದಿದೆ. ಆರೋಪಿಯೊಬ್ಬ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಬಳಿಕ ನನ್ನಿಂದ ತಪ್ಪಾಯಿತು, ದಯವಿಟ್ಟು ಈ ಬಾರಿ ಕ್ಷಮಿಸಿ ಯೋಗಿಜೀ ಎಂದು ಕೈ ಮುಗಿದು ಬೇಡಿಕೊಂಡಿದ್ದಾನೆ. ಈ ವೀಡಿಯೋವೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಮನೆ ಮುಂದೆ ಬುಲ್ಡೋಜರ್ ಪ್ರತ್ಯಕ್ಷ – ಪರಾರಿಯಾಗಿದ್ದ ಯುಪಿ ರೇಪ್ ಆರೋಪಿ ಶರಣು
ವರದಿಗಳ ಪ್ರಕಾರ ಶುಕ್ರವಾರ ತಡರಾತ್ರಿ ಘಾಜಿಯಾಬಾದ್ನಲ್ಲಿ ಪೊಲೀಸರು ದುಷ್ಕರ್ಮಿಯೊಬ್ಬನ ಕಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸಿದ್ದರು. ಆತ ಬಂಧನಕ್ಕೊಳಗಾಗುವ ಸಂದರ್ಭ, ಯೋಗಿಜೀ ನನ್ನನ್ನು ಕ್ಷಮಿಸಿ, ಇನ್ನು ಮುಂದೆ ನಾನು ಇಂತಹ ತಪ್ಪುಗಳನ್ನು ಮಾಡುವುದಿಲ್ಲ, ಯಾರನ್ನೂ ತಪ್ಪು ದೃಷ್ಟಿಯಿಂದ ನೋಡುವುದಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಬೇಡಿಕೊಂಡಿದ್ದಾನೆ. ಇದನ್ನೂ ಓದಿ: ಯೋಗಿ 2.0 ಆಡಳಿತ: 2 ಎನ್ಕೌಂಟರ್ – ಪರಾರಿಯಾಗಿದ್ದ 50ಕ್ಕೂ ಹೆಚ್ಚು ಅಪರಾಧಿಗಳು ಶರಣು
गाजियाबाद में गैस गोदाम का कैश लूटने वाला नावेद एनकाउंटर के बाद। pic.twitter.com/VNCxffFKQZ
— Prashant Umrao (@ippatel) September 3, 2022
ಗ್ಯಾಸ್ ಗೋಡೌನ್ನಲ್ಲಿ ದರೋಡೆ ನಡೆಸಿದ ಆರೋಪದ ಮೇಲೆ ಪೊಲೀಸರು ಈ ದುಷ್ಕರ್ಮಿಯ ಹುಡುಕಾಟದಲ್ಲಿದ್ದರು. ಬಳಿಕ ಆತನ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನಿದ್ದ ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಪರಾರಿಯಾಗಲು ಯತ್ನಿಸಿದ್ದ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ. ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆತನ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.