– ಮದ್ವೆಯಾಗಿದ್ರೂ ಇಬ್ಬರಿಗೂ ಸಂಬಂಧ
– ಕಾಡಿನಲ್ಲಿ ಮೃತದೇಹ ತಿಂದಿರೋ ಪ್ರಾಣಿಗಳು
ಹೈದರಾಬಾದ್: ನಾಪತ್ತೆಯಾಗಿದ್ದ 27 ದಿನಗಳ ನಂತರ ಮಹಿಳೆ ಮತ್ತು ಆಕೆಯ ಪ್ರಿಯತಮನ ಮೃತದೇಹಗಳು ತೆಲಂಗಾಣದ ವಿಕರಾಬಾದ್ ಜಿಲ್ಲೆಯ ಅನಂತಗಿರಿಯಲ್ಲಿರುವ ಕಾಡಿನ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಮೃತರನ್ನು ಶಿವಲೀಲಾ (23) ಮತ್ತು ಮಹೇಂದರ್ (26) ಎಂದು ಗುರುತಿಸಲಾಗಿದೆ. ಸರ್ಕಾರ ಕೊರೊನಾ ಲಾಕ್ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ಕೆಲವರು ಕಾಡಿನೊಳಗೆ ಹೋಗಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಗ್ರಾಮಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಮೃತರ ಅಸ್ಥಿಪಂಜರದ ಅವಶೇಷಗಳು ಮಾತ್ರ ಪತ್ತೆಯಾಗಿದೆ. ಕಾಡಿನಲ್ಲಿ ಮೃತಪಟ್ಟಿರುವ ಕಾರಣ ಮೃತದೇಹವನ್ನು ಪ್ರಾಣಿಗಳು ತಿಂದಿವೆ. ಮೃತದೇಹಗಳ ಬಳಿ ಪರ್ಸ್ ಮತ್ತು ಬೈಕ್ ಪತ್ತೆಯಾಗಿದೆ. ಬೈಕ್ ನಂಬರ್ ಸಹಾಯದಿಂದ ತನಿಖಾ ಅಧಿಕಾರಿಗಳು ಮೃತ ವ್ಯಕ್ತಿಯನ್ನು ಮಹೇಂದರ್ ಅಂತ ಗುರುತಿಸಿದ್ದಾರೆ ಎಂದು ವಿಕರಾಬಾದ್ ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ ಮೊದಲ ವಾರದಲ್ಲಿ ಮಹೇಂದರ್ ನಾಪತ್ತೆಯಾಗಿದ್ದು, ಆತ ಹೋಗುವಾಗ ಬೈಕ್ ಕೂಡ ತೆಗೆದುಕೊಂಡು ಹೋಗಿದ್ದನು ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ. ಇನ್ನೂ ಮಹಿಳೆಯನ್ನು ಕೋಟ್ಪಲ್ಲಿಯ ಶಿವಲೀಲಾ ಎಂದು ಗುರುತಿಸಲಾಗಿದೆ. ಈಕೆ ಕೂಲಿ ಕೆಲಸ ಮಾಡುತ್ತಿದ್ದಳು. ಈಕೆಯೂ ಏಪ್ರಿಲ್ನಿಂದ ನಾಪತ್ತೆಯಾಗಿದ್ದು, ಕುಟುಂಬದವರು ಏಪ್ರಿಲ್ 6 ರಂದು ನಾಪತ್ತೆಯ ದೂರನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರಿಬ್ಬರು ಸಂಬಂಧದಲ್ಲಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ಶಿವಲೀಲಾ ಮದುವೆಯಾಗಿ ಐದು ವರ್ಷಗಳಾಗಿದೆ. ಮಹೇಂದರ್ ಮದುವೆಯಾಗಿ ಮಕ್ಕಳು ಕೂಡ ಇದ್ದಾವೆ. ಆದರೆ ಸುಮಾರು ಎರಡು ವರ್ಷಗಳ ಹಿಂದೆ ಕಟ್ಟಣ ನಿರ್ಮಾಣ ಕೆಲಸ ಮಾಡುವಾಗ ಇಬ್ಬರಿಗೂ ಪರಿಯಚವಾಗಿದೆ ಎಂದು ತಿಳಿದುಬಂದಿದೆ.
ನಾಪತ್ತೆ ದೂರ ದಾಖಲಿಸಿದ ನಂತರ ಪೊಲೀಸ್ ಅಧಿಕಾರಿಗಳು ಅವರ ಮೊಬೈಲ್ ಫೋನ್ ಟ್ರೇಸ್ ಮಾಡುವ ಮೂಲಕ ಪತ್ತೆಹಚ್ಚಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ತನಿಖೆಯ ಅಧಿಕಾರಿಗಳು ಪತ್ತೆಹಚ್ಚುವುದನ್ನು ತಪ್ಪಿಸಲು ತಮ್ಮ ಸಿಮ್ ಕಾರ್ಡ್ಗಳನ್ನು ನಾಶಪಡಿಸಿರಬಹುದೆಂದು ಶಂಕಿಸಿದ್ದರು.
ಏಪ್ರಿಲ್ 6 ರಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಹಾಲು ಮತ್ತು ಬಿಸ್ಕೆಟ್ ಪತ್ತೆಯಾಗಿದ್ದು, ಅವುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಸದ್ಯಕ್ಕೆ ಈ ಕುರಿತು ತನಿಖೆ ನಡೆಯುತ್ತಿದೆ. ಆದರೆ ಇನ್ನೂ ಇವರಿಬ್ಬರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.