ಮಡಿಕೇರಿ: ಆಹಾರ ಅರಸಿ ಕಾಡಿನಿಂದ ನಗರಕ್ಕೆ ಬಂದು ತಂತಿ ಬೇಲಿಗೆ ಸಿಲುಕಿ ನರಳುತ್ತಿದ್ದ ಕಡವೆಯನ್ನು ಸಾರ್ವಜನಿಕರು ರಕ್ಷಣೆ ಮಾಡಿದ ಘಟನೆ ಮಂಜಿನನಗರಿ ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿ ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ನಸುಕಿನ ಜಾವ ತಂತಿ ಬೇಲಿಗೆ ಸಿಲುಕಿಕೊಂಡು ಕಡವೆ ನರಳುತ್ತಿತ್ತು. ಇದನ್ನು ಕಂಡ ಸಾರ್ವಜನಿಕರು ಕಡವೆಯನ್ನು ರಕ್ಷಣೆ ಮಾಡಲು ಮುಂದಾದರು. ಆದರೆ ಕಡವೆ ಹತ್ತಿರ ಹೋಗುವುದಕ್ಕೆ ಭಯ ಪಡುತ್ತಿದ್ದ ಸಾರ್ವಜನಿಕರು ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ತಕ್ಷಣವೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಡವೆಯನ್ನು ತಂತಿ ಬೇಲಿಯಿಂದ ರಕ್ಷಣೆ ಮಾಡಿದರು. ಬಳಿಕ ಹಗ್ಗದ ಮೂಲಕ ಬೇರೆ ಕಡೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಗಾಬರಿಗೊಂಡ ಕಡವೆ ಜಿಲ್ಲಾ ಕ್ರೀಡಾಂಗಣ ಇರುವ ಮನೆಯ ಮೇಲೆ ಹಾರಿದ ಪರಿಣಾಮ ಮನೆಯ ಸೀಟ್ ಮುರಿದುಹೋಗಿದೆ.
ಅಲ್ಲದೇ ಪಕ್ಕದ ಮನೆಯ ತಡೆಗೋಡೆಗೂ ಹಾನಿಯಾಗಿದೆ. ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸತತ ಎರಡು ಗಂಟೆಗಳ ಕಾಲ ಶ್ರಮಪಟ್ಟು ಕಡವೆಯನ್ನು ಅರಣ್ಯ ಇಲಾಖೆಗೆ ಕರೆತಂದರು. ಅಲ್ಲದೆ ಗಾಯಗೊಂಡಿದ ಕಡವೆಗೆ ಚಿಕಿತ್ಸೆ ನೀಡಿ ನಂತರ ದುಭಾರೆ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟುಬಂದರು.