ಮಡಿಕೇರಿ: ಕಳೆದ ಅನೇಕ ದಿನಗಳಿಂದ ಕುಶಾಲನಗರ ಮತ್ತು ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ರಾಜರೋಷವಾಗಿ ನಡೆದಾಡಿಕೊಂಡು ವಾಹನ ಸವಾರರಿಗೆ ಹೆದರಿಸುತ್ತಿದ್ದ ಕಾಡಾನೆಯನ್ನು ಹೆಡೆಮುರಿ ಕಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಕಳೆದ ಒಂದುವರೆ ತಿಂಗಳ ಹಿಂದೆ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಬಲಿ ತೆಗೆದುಕೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಆನೆಯನ್ನು ಹಿಡಿಯಲು ಪಣ ತೊಟ್ಟಿದ್ದ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಹಿಡಿದಿದ್ದು ಹೀಗೆ?
ಸೋಮವಾರಪೇಟೆ ತಾಲ್ಲೂಕಿನ 7 ಹೊಸಕೋಟೆ ಗ್ರಾಮದ ಅತ್ತೂರು ಮೀಸಲು ಅರಣ್ಯ ಪ್ರದೇಶದಲ್ಲಿ ಪಶುವೈದ್ಯಾಧಿಕಾರಿ ಉಮಾಶಂಕರ್ ಆನೆಗೆ ಅರಿವಳಿಕೆ ಮದ್ದು ನೀಡಿದರು. ಮದ್ದು ನೀಡಿದ ಬಳಿಕ ಸ್ವಲ್ಪ ದೂರ ಓಡಿದ ಕಾಡಾನೆ ಕೆಳಗೆ ಬಿತ್ತು. ಬಿದ್ದ ಕಾಡಾನೆಯೆ ಕಾಲುಗಳಿಗೆ ಮತ್ತು ಕುತ್ತಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಹಗ್ಗಗಳನ್ನು ಕಟ್ಟಿದರು. ನಂತರ ಬಿದ್ದ ಕಾಡಾನೆಯನ್ನು ಲಾರಿಯಲ್ಲಿರುವ ಕ್ರಾಲ್ಗೆ ಹಾಕುವ ಕಾರ್ಯಾಚರಣೆ ಆರಂಭವಾಯಿತು.
ಹರ್ಷ, ವಿಕ್ರಮ, ಅಭಿಮನ್ಯು, ಕೃಷ್ಣ ಸೇರಿದಂತೆ ಒಟ್ಟು 7 ಸಾಕಾನೆಯ ಮುಂದೆ ಕಾಡಾನೆ ತನ್ನ ಮೊಂಡಾಟವನ್ನು ಪ್ರದರ್ಶನ ಮಾಡಿತ್ತು. ಆದರೆ ಸಾಕಾನೆಗಳು ತಮ್ಮ ಶಕ್ತಿಯಿಂದ ಬಲವಂತವಾಗಿ ಕಾಡಾನೆಯನ್ನು ಲಾರಿಗೆ ಹತ್ತಿಸುವಲ್ಲಿ ಯಶಸ್ವಿಯಾದವು. 75ಕ್ಕೂ ಹೆಚ್ಚು ಆರಣ್ಯಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಾಡಾನೆಯನ್ನು ಬಂಡೀಪುರ ಮೀಸಲು ಅರಣ್ಯ ಪ್ರದೇಶಕ್ಕೆ ಬಿಡಲು ತೆಗೆದುಕೊಂಡು ಹೋಗಲಾಯಿತು.
https://www.youtube.com/watch?v=PHhpL1Qy9w8