ಬಳ್ಳಾರಿ: ಮೂವರು ವಿದೇಶಿಗರು ಹಿಂದೂ ದೇವರನ್ನು ನಂಬಿ ವಿಶ್ವಪ್ರಸಿದ್ಧ ಹಂಪಿಯ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನಕ್ಕೆ ಇಂದು ಆಗಮಿಸಿ ತಮ್ಮ ಹರಕೆ ತೀರಿಸಿದ್ದಾರೆ.
ಫ್ರಾನ್ಸ್ ದೇಶದಿಂದ ಪ್ರವಾಸಕ್ಕೆ ಆಗಮಿಸಿರುವ ಉಂಬೆರ್ಟೋ, ಜೀನ್ ಲುಕಾಸ್ ಮತ್ತು ಜೀನ್ ಎನ್ನುವ ಮೂವರು ವಿದೇಶಿಗರು ಇಂದು ಅತ್ಯಂತ ಶ್ರದ್ಧಾಭಕ್ತಿಯಿಂದ ಹಿಂದೂ ಸಂಪ್ರದಾಯದಂತೆ ಶ್ವೇತವಸ್ತ್ರ ಧರಿಸಿ, ತುಂಗಭದ್ರ ನದಿಯಲ್ಲಿ ಸ್ನಾನ ಮಾಡಿ ಶ್ರೀ ವಿರುಪಾಕ್ಷನ ದರ್ಶನ ಪಡೆದಿದ್ದಾರೆ. ಶ್ರೀ ವಿರುಪಾಕ್ಷನಿಗೆ ತಾವು ಅಂದುಕೊಂಡಿದ್ದ ಹರಕೆ ತೀರಿಸಲು 20 ಸಾವಿರ ಮೌಲ್ಯದ ಬೆಳ್ಳಿ ನಾಗಪ್ಪ ಹಾಗೂ ಎರಡು ಹಿತ್ತಾಳೆ ದೀಪಗಳನ್ನು ದೇವಸ್ಥಾನಕ್ಕೆ ಸಲ್ಲಿಸಿದ್ದಾರೆ.
ಈ ವೇಳೆ ದೇವಸ್ಥಾನದ ಅರ್ಚಕರಾದ ಶೇಷುಸ್ವಾಮಿ, ಪ್ರಶಾಂತ ಪೂಜಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಹರಕೆ ಕಾಣಿಕೆ ವಸ್ತುಗಳನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಬಿ. ಶ್ರೀನಿವಾಸ್ ದೇವಸ್ಥಾನದ ಪರವಾಗಿ ಸ್ವೀಕರಿಸಿದರು.
ತಾವು ಅಂದುಕೊಂಡಿದ್ದು ಜರುಗಲಿ ಎಂದು ತಮ್ಮ ಸ್ನೇಹಿತರು ಹೇಳಿದಂತೆ ಶ್ರೀ ವಿರುಪಾಕ್ಷನಿಗೆ ನಾವು ಹರಕೆ ತೀರಿಸಿದ್ದೇವೆ. ನಾವು ಹಿಂದೂ ಸಂಪ್ರದಾಯವನ್ನು ಗೌರವಿಸುತ್ತೇವೆ. ನಾವು ಪುಟ್ಟಪರ್ತಿ ಸಾಯಿಬಾಬಾ ಭಕ್ತರು. ಪ್ರತಿವರ್ಷವೂ ಭಾರತಕ್ಕೆ ಬರುತ್ತೇವೆ. ಹಾಗೆಯೇ ಈ ವರ್ಷವು ಬಂದು ಹಂಪಿಯ ಲಕ್ಷಾಂತರ ಭಕ್ತರಂತೆ ನಾವು ಹರಕೆ ತೀರಿಸಿದ್ದೇವೆ ಎಂದು ವಿದೇಶಿ ಭಕ್ತರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv