ಚೆನ್ನೈ: ದೇವಸ್ಥಾನವನ್ನು ಹೂವಿನಿಂದ, ಹಣ್ಣಿನಿಂದ ಅಲಂಕಾರ ಮಾಡುವುದು ಸಾಮಾನ್ಯ. ಆದರೆ ಚೆನ್ನೈನ ಬಾಲ ವಿನಯಗಾರ್ ನ ಗಣಪತಿ ದೇವಸ್ಥಾನವನ್ನು ವಿಶೇಷವಾಗಿ ದುಡ್ಡಿನಿಂದ ಅಲಂಕಾರ ಮಾಡಲಾಗಿದೆ.
ತಮಿಳುನಾಡಿನಲ್ಲಿಂದು ಹೊಸ ವರ್ಷ ಸಂಭ್ರಮದ ಕಾರಣ ದೇವಾಯಕ್ಕೆ ದುಡ್ಡಿನಿಂದ ಅಲಂಕಾರ ಮಾಡಲಾಗಿದೆ. ಒಂದು ರೂ. ನೋಟಿನಿಂದ ಹಿಡಿದು 2 ಸಾವಿರ ರೂ. ವರೆಗಿನ ಎಲ್ಲಾ ರೀತಿಯ ನೋಟುಗಳನ್ನು ದೇವಾಲಯದ ಗೋಡೆಗೆ ಅಂಟಿಸಿ ಅಲಂಕಾರಕ್ಕೆ ಬಳಕೆ ಮಾಡಲಾಗಿದೆ.
ಸಂಪೂರ್ಣವಾಗಿ ದೇವಾಲಯವನ್ನು ಈ ರೀತಿ ಅಲಂಕಾರ ಮಾಡಲು 4 ಲಕ್ಷ ರೂಪಾಯಿಗಳನ್ನು ಬಳಸಲಾಗಿದೆ. ಪ್ರತಿ ಹೊಸ ವರ್ಷ ದಿನದಂದು ದೇವಾಲಯಕ್ಕೆ ಈ ರೀತಿ ಅಲಂಕಾರ ಮಾಡಲಾಗುತ್ತದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ದೇವಾಲಯದಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ವಿಗ್ರಹದ ಸುತ್ತಲು ಹೊಸ 200 ರೂ. ಹಾಗೂ 50 ರೂ. ಮೌಲ್ಯದ ನೋಟುಗಳನ್ನು ಬಳಕೆ ಮಾಡಿ ಅಲಂಕಾರ ಮಾಡಲಾಗಿದೆ.
ತಮಿಳುನಾಡಿನಲ್ಲಿ ಏಪ್ರಿಲ್ 14 ದಿನವನ್ನು ಹೊಸ ವರ್ಷದ ಆರಂಭ ಎಂದು ಆಚರಣೆ ಮಾಡುತ್ತಾರೆ. ಅಲ್ಲದೇ ಇಂತಹದ್ದೆ ಆಚರಣೆ ಅಸ್ಸಾಂ ನಲ್ಲಿ ‘ಬಿಹೂ’ ಕೇರಳದಲ್ಲಿ ‘ವಿಷು’ ಎಂಬ ಹೆಸರುಗಳ ಮೂಲಕ ವಿಶೇಷ ಆಚರಣೆ ಮಾಡುತ್ತಾರೆ. ವಿಶೇಷ ಸಾಂಸ್ಕೃತಿಕ ಆಚರಣೆ ಮಾಡುವ ಎಲ್ಲಾ ರಾಜ್ಯದ ಜನರಿಗೂ ಪ್ರಧಾನಿ ನರೇಂದ್ರ ಮೋದಿ ಅವರು ಸರಣಿ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.