ವಿಜಯಪುರ: ಲೋಕಾಯುಕ್ತವನ್ನು ಬಲಹೀನಗೊಳಿಸಿ ರಾಜ್ಯ ಸರ್ಕಾರ ಎಸಿಬಿಯನ್ನು ಜಾರಿಗೆ ತಂದಿದೆ. ರಾಜಕಾರಣಿಗಳು ತಾವು ಮಾಡುವ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಎಸಿಬಿ ಹುಟ್ಟು ಹಾಕಿದ್ದಾರೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆಕ್ರೋಶ ಹೊರಹಾಕಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಸಿಬಿಗೆ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಬಂದ ತಕ್ಷಣ ಅವರು ಭ್ರಷ್ಟರ ವಿರುದ್ಧ ಕ್ರಮ ಕೈಗಳ್ಳುವ ಅಧಿಕಾರವಿಲ್ಲ. ಯಾಕೆಂದರೆ ರಾಜಕಾರಣಿಗಳ ವಿರುದ್ಧ ವಿಚಾರಣೆ ಮಾಡುವ ಮುನ್ನ ಅವರು ಸರ್ಕಾರದ ಅನುಮತಿ ಪಡೆಯಬೇಕು. ಆಗ ಭ್ರಷ್ಟರಿಗೆ ಮಾಹಿತಿ ಸಿಕ್ಕಿ ಆತ ಎಚ್ಚೆತ್ತುಕೊಳ್ಳುತ್ತಾನೆ. ಇದರಲ್ಲೇ ಎಸಿಬಿ ಬಲ ದುರ್ಬಲ ಏನು ಅನ್ನೋದನ್ನ ಯೋಚಿಸಿ. ಆದರೆ ಲೋಕಾಯುಕ್ತದಲ್ಲಿ ಅಧಿಕಾರಿ ಕ್ರಮ ತೆಗೆದುಕೊಳ್ಳಲು ಮುಕ್ತನಾಗಿರುತ್ತಾನೆ. ಯಾವ ರಾಜಕೀಯ ಪಕ್ಷಕ್ಕೂ ಸ್ವಯಂ ವಿಚಾರಣಾ ಸಂಸ್ಥೆ ಬೇಡವಾಗಿದೆ. ಒಂದು ಪಕ್ಷ ಅಧಿಕಾರದಲ್ಲಿದ್ದಾಗ ಮತ್ತೊಂದು ಪಕ್ಷ ಲೋಕಾಯುಕ್ತ ವರದಿ ಜಾರಿಮಾಡಿಲ್ಲ ಎಂದು ಪ್ರತಿಭಟನೆ ಮಾಡುತ್ತೆ. ಆದರೆ ಮುಂದೆ ಅವರೇ ಅಧಿಕಾರಕ್ಕೆ ಬಂದಾಗಲೂ ಅದನ್ನ ಜಾರಿಗೆ ತರಲ್ಲ. ಇದು ರಾಜಕೀಯದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ ಎಂದು ಹರಿಹಾಯ್ದರು. ಇದನ್ನೂ ಓದಿ:ಮೋದಿ ವಿರುದ್ಧ ಪ್ರತಿಭಟನೆಗಿಳಿದ ದೋಸ್ತಿ
ಐಟಿ ದಾಳಿ ವಿರುದ್ಧ ಕಾಂಗ್ರೆಸ್-ಜೆಡಿಎಸ್ ನಾಯಕರು ಪ್ರತಿಭಟನೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಎಸಿಬಿ ಅಧಿಕಾರಿಗಳು ಒಬ್ಬ ರಾಜಕಾರಣಿ ವಿರುದ್ಧ ವಿಚಾರಣೆ ಮಾಡಬೇಕಾದರೆ ಸರ್ಕಾರದ ಅನುಮತಿ ಪಡೆಯಬೇಕು. ಐಟಿ ಅಧಿಕಾರಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿರುವುದನ್ನು ವಿರೋಧಿಸಿ ಸಾರ್ವಜನಿಕ ಪ್ರತಿಭಟನೆ ಮಾಡುವುದು ತಪ್ಪು. ಇನ್ನೊಬ್ಬ ಸಿಎಂ ಮಾಡಿದ್ದನ್ನೇ ನಾನು ಮಾಡುತ್ತೇನೆ ಅನ್ನೋದು ಕೂಡ ತಪ್ಪು. ರಾಜಕಾರಣಿಗಳ ಮೇಲೆ ಐಟಿ ದಾಳಿ ನಡೆಸಿದ್ದು ಕಾನೂನ ವಿರುದ್ಧ ಅಂತ ಅನಿಸಿದರೇ ಕೋರ್ಟ್ ಗೆ ಹೋಗಿ ತಡೆಯಾಜ್ಞೆ ತನ್ನಿ. ಅದನ್ನು ಬಿಟ್ಟು ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ. ನಿಮಗಿರುವ ಅಧಿಕಾರ ಬಳಸಿ ಬೆದರಿಕೆ ಹಾಕಬೇಡಿ ಎಂದು ಸಂತೋಷ್ ಹೆಗ್ಡೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಾಳೆ ದಾಳಿ ಮಾಡ್ತಾರೆ ಅದಕ್ಕೆ ಪ್ರತಿಭಟನೆ ಮಾಡ್ತೀನಿ ಎನ್ನುವುದು ಸಿಎಂ ಬಾಯಿಯಿಂದ ಬರಬಾರದು. ಐಟಿ ದಾಳಿಯಾದರೇ ಎದರಿಸುತ್ತೇನೆ ಅನ್ನೊ ಹಾಗೆ ಸಿಎಂ ಇರಬೇಕು. ಬೇರೆ ಸಿಎಂಗಳು ಪ್ರತಿಭಟನೆ ಮಾಡಿದ್ದಾರೆ, ನಾನು ಕೂಡ ಮಾಡುತ್ತೆನೆ ಅನ್ನೋದು ಸರಿಯಲ್ಲ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.