– ವಿದ್ಯಾರ್ಥಿಗಳ ಕಾರ್ಯಕ್ಕೆ ಗ್ರಾಮಸ್ಥರಿಂದ ಶ್ಲಾಘನೆ
ನೆಲಮಂಗಲ: ಮಹಾಮಾರಿ ಕೊರೊನಾ ರೋಗದ ಹಿನ್ನೆಲೆ, ಹಲವೆಡೆ ಹಲವಾರು ರೀತಿ ಸಂಘ ಸಂಸ್ಥೆಗಳು ನೆರವನ್ನು ನೀಡುತ್ತಿದೆ. ಇದೇ ಹಾದಿಯಲ್ಲಿ ಗ್ರಾಮದ ಶಾಲೆಯ ಹಳೆ ವಿದ್ಯಾರ್ಥಿಗಳು ಆಹಾರ ಕಿಟ್ ವಿತರಣೆ ಮಾಡಿ ಸಾರ್ಥಕತೆ ಮೆರೆದಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ವಿಶೇಷ ಪ್ರಯತ್ನ ಮಾಡಿ ಯಶಸ್ವಿಯಾಗಿ ಒಂದು ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.
ಹಳೆ ವಿದ್ಯಾರ್ಥಿಗಳ ಜೊತೆ ಕೈಜೋಡಿಸಿದ ಎಸ್.ಎಮ್ ಟ್ರೇಡರ್ಸ್ ಹಾಗೂ ಕುಮುದ್ವತಿ ವಿಷನ್ ಪ್ರೈ.ಲಿ ಸಹಕಾರ ಹೆಚ್ಚಿನದಾಗಿ ನೀಡಿದೆ. ಸಕ್ಕರೆ, ಸಾಂಬರ್ ಪದಾರ್ಥ, ದಿನಬಳಕೆ ವಸ್ತುಗಳ ವಿತರಣೆ ಮಾಡಿದ್ದು, ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ, ಭಟ್ಟರಹಳ್ಳಿ, ವನ್ನಸಂದ್ರ, ಗಾಂಧಿ ಗ್ರಾಮ, ದೊಡ್ಡಕರೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ವಿತರಣೆ ಮಾಡಿದ ಹಳೆ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿದ ಹಳೆಯ ವಿಧ್ಯಾರ್ಥಿ ಮುನಿರಾಜು, ನಾವು ನಮ್ಮ ಗ್ರಾಮ ನಮ್ಮ ಜನರ ಕ್ಷೇಮ ಎಂಬ ನಿಟ್ಟಿನಲ್ಲಿ ಪ್ರತಿ ಮನೆ ಮನೆ ಬಾಗಿಲಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಹಾಗೂ ಹಳ್ಳಿಯ ಜನರಲ್ಲಿ ಅರಿವು ಮೂಡಿಸುವ ಹೊಸ ಪ್ರಯತ್ನ ಯಶಸ್ವಿಯಾಗಿದೆ. ಜೀವನದಲ್ಲಿ ಮನುಷ್ಯ-ಮನುಷ್ಯನ ಸ್ನೇಹ ಮುಖ್ಯವಾದ ಜೀವನ ಅವಶ್ಯಕತೆ ಎಂದು ಈ ಕಾರ್ಯಕ್ಕೆ ನಮ್ಮ ತಂಡ ಸಿದ್ಧವಾಗಿದೆ ಎಂದರು. ಈ ವೇಳೆ ಚಿಕ್ಕಹನುಮೇಗೌಡ, ಹನುಮಂತರಾಜು, ಮಹೇಶ್, ಹನುಮಯ್ಯ, ನಾಗರಾಜು, ರುದ್ರೇಶ್, ಮತ್ತಿತರ ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು.