ದಾವಣಗೆರೆ: ನಗರದಲ್ಲಿ (Davanagere) ಪೊಲೀಸರ (Police) ಮೇಲೆ ಕಾಂಗ್ರೆಸ್ ಮುಖಂಡನ ಪುತ್ರರು ಹಲ್ಲೆ ಮಾಡಿದ ಪ್ರಕರಣ ಮಾಸುವ ಮುನ್ನವೇ, ಅಕ್ರಮ ಪಡಿತರ ಅಕ್ಕಿ ದಂಧೆಕೋರರು ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೆ ಒಳಗಾದ ಅಧಿಕಾರಿಯನ್ನು ಎಂ.ನಜರುಲ್ಲಾ ಎಂದು ಗುರುತಿಸಲಾಗಿದೆ. ಹರಿಹರ ತಾಲೂಕಿನ ಆಹಾರ ನೀರಿಕ್ಷಕರಾಗಿ ಕೆಲಸ ಮಾಡುತ್ತಿರುವ ಅವರು, ನ್ಯಾಯ ಬೆಲೆ ಅಂಗಡಿಗಳನ್ನು ಪರಿಶೀಲನೆ ನಡೆಸಲು ಹೋಗಿದ್ದರು. ಈ ಸಂದರ್ಭದಲ್ಲಿ ಹಳ್ಳದಕೇರಿಯ ಅಹಲ್ಯ ಸ್ತ್ರೀ ಶಕ್ತಿ ಸಿ.ಸಿ.ಎಸ್. ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದ್ದರು. ಅಲ್ಲಿ ಗೌಸಿಯಾ ಕಾಲೋನಿ ಸೈಯದ್ ನೂರುದ್ದಿನ್ ಎಂಬಾತ ಅಕ್ಕಿ ದಂಧೆಕೋರ ನ್ಯಾಯಬೆಲೆ ಅಂಗಡಿ ಮುಂದೆ ಚೀಲ ಹಿಡಿದುಕೊಂಡು ಸಾರ್ವಜನಿಕರಿಂದ ಪಡಿತರ ಸಂಗ್ರಹಿಸುತ್ತಿದ್ದ.
ಇದನ್ನು ಅಹಾರ ಇಲಾಖೆ ಅಧಿಕಾರಿ ನಜರುಲ್ಲಾ ಪ್ರಶ್ನಿಸಿದ್ದಾರೆ. ಈ ವೇಳೆ, ನನ್ನನ್ನು ಕೇಳುವುದಕ್ಕೆ ನೀನ್ಯಾರು, ನ್ಯಾಯಬೆಲೆ ಅಂಗಡಿ ನಿಮ್ಮ ಅಪ್ಪಂದಾ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಅಹಾರ ಇಲಾಖೆ ಅಧಿಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಹರಿಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ತಡೆಯಲು ಹೋದ ಅಧಿಕಾರಿಯ ವಿರುದ್ಧ ಈ ರೀತಿ ಹಲ್ಲೆ ನಡೆದಿದ್ದ ಖಂಡನೀಯ. ಕೂಡಲೇ ಅಹಾರ ಇಲಾಖೆ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ಗಡಿಪಾರು ಮಾಡುವಂತೆ ಕರವೇ ಪ್ರವೀಣ್ ಶೆಟ್ಟಿ ಬಣ ಅಗ್ರಹಿಸಿದೆ.

