ಚಿತ್ರದುರ್ಗ: ವಿವಿಧ ತರಕಾರಿಗಳು ಹಾಗು ಹಣ್ಣುಗಳಲ್ಲಿ ಕಣ್ಮನ ತಣಿಸುವ ಹೂಗಳ ಉದ್ಯಾನವನದಲ್ಲಿ, ಭಕ್ತರನ್ನು ಆಕರ್ಷಿಸುತ್ತಿರೋ ಸಿದ್ದಗಂಗಾ ಶ್ರೀಗಳು ಹಾಗು ಭೂಮಿತಾಯಿಯ ಕಲಾಕೃತಿಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ಅಂಥದ್ದೊಂದು ಅದ್ಭುತ ಲೋಕ ಕೋಟೆನಾಡು ಚಿತ್ರದುರ್ಗದಲ್ಲಿ ಸೃಷ್ಟಿಯಾಗಿದೆ.
ಹೌದು. ಚಿತ್ರದುರ್ಗದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು 28ನೇ ಫಲಪುಷ್ಪ ಪ್ರದರ್ಶನವನ್ನು ವಿಶೇಷವಾಗಿ ಆಯೋಜಿಸಿದ್ದಾರೆ. ಬಗೆಬಗೆಯ ಕಲರ್ ಫುಲ್ ಹೂಗಳ ಲೋಕವೇ ಇಲ್ಲಿ ಅನಾವರಣಗೊಂಡಿದೆ. ಇಂತಹ ಬರಗಾಲದಲ್ಲೂ ಎಲ್ಲಿಂದ ಇಷ್ಟೊಂದು ಹೂವು, ಹಣ್ಣುಗಳನ್ನು ಬೆಳೆದರು ಎಂಬಂತೆ ಎಲ್ಲರನ್ನು ಅಚ್ಚರಿಗೊಳಿಸುವ ಸುಮಾರು 1ಲಕ್ಷಕ್ಕೂ ಅಧಿಕ ಕಲರ್ಫುಲ್ ಹೂವಿನ ಗಿಡಗಳಲ್ಲಿವೆ.
ವಿಶೇಷ ಕುಬ್ಜ ಗಿಡಗಳು, ವಿವಿಧ ಬಗೆಯ ತರಕಾರಿಗಳು ರೈತರಿಗೆ ಅಗತ್ಯ ಮಾಹಿತಿ ನೀಡುವುದರ ಜೊತೆಗೆ ಅದ್ಭುತವಾದ ದೀಪಾಲಂಕಾರ ಹಾಗೂ ಅಪರೂಪದ ಚಿತ್ರಕಲೆ ಪ್ರದರ್ಶನ ಜನಸಾಗರವನ್ನೇ ಕೈಬೀಸಿ ಕರೆಯುತ್ತಿದ್ದು, ವಿಶೇಷ ಆಕರ್ಷಣೆಯಾಗಿ ತ್ರಿವಿಧ ಧಾಸೋಹಿ ಡಾ. ಶಿವಕುಮಾರ ಶ್ರೀಗಳ ಆಕರ್ಷಕ ಕಲಾಕೃತಿ ಫಲಪುಷ್ಪ ಪ್ರದರ್ಶನದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ವಿವಿಧ ರೂಪಗಳಲ್ಲಿ ಕಲ್ಲಂಗಡಿಯಲ್ಲಿ ದರ್ಶನ ನೀಡ್ತಿರೋ ನಡೆದಾಡುವ ದೇವರ ಆಶೀರ್ವಾದ ಇಲ್ಲಿ ಲಭಿಸುವಂತೆ ಭಾಸವಾಗುವ ವಿಶೇಷ ಪ್ರದರ್ಶನ ಇಲ್ಲಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಸವಿತಾ ಹೇಳಿದ್ದಾರೆ.
ಈ ಜಿಲ್ಲೆಯ ಪ್ರಗತಿಪರ ರೈತರು ಬೆಳೆದ ಅಪರೂಪದ ಹಣ್ಣು, ತರಕಾರಿ, ತೋಟದ ಬೆಳೆಗಳ ಆಕರ್ಷಕ ಪ್ರದರ್ಶಿಕೆಯೂ ಇಲ್ಲಿ ಇದೆ. ಅಲ್ಲದೆ ಬರದನಾಡಲ್ಲಿ ಬೆಳೆಯಬಹುದಾದ ಅಣಬೆ ಹಾಗು ಹುಲ್ಲು ಬೆಳೆಯ ಮಾಹಿತಿ ಕೂಡ ಇಲ್ಲಿ ಲಭ್ಯವಾಗುತ್ತಿದ್ದು, ಶೈಕ್ಷಣಿಕವಾಗಿಯೂ ಉಪಯುಕ್ತವೆನಿಸಿ, ಝಗಝಗಿಸೋ ವಿದ್ಯುತ್ ದೀಪಗಳ ಅಲಂಕಾರದಲ್ಲಿ ಮಿನುಗುತ್ತಿರೋ ಕಲಾಕೃತಿಗಳು ಹಾಗೂ ಫಲಪುಷ್ಪಗಳನ್ನು ವೀಕ್ಷಿಸಲು ಜನಸಾಗರವೇ ಹರಿದು ಬರುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನ ಯಶಸ್ವಿಯತ್ತ ಹೆಜ್ಜೆ ಹಾಕ್ತಿದೆ ಎಂದು ಸ್ಥಳೀಯರಾದ ರಶ್ಮಿ ಹೇಳುತ್ತಾರೆ.
ಒಟ್ಟಾರೆಯಾಗಿ ಕೋಟೆನಾಡಿನಲ್ಲಿ ತೋಟಗಾರಿಕಾ ಇಲಾಖೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ದುರ್ಗದ ಜನರ ಕಣ್ಮನ ತಣಿಸುತ್ತಿದೆ. ಮಳೆಯಿಲ್ಲದೆ ಬಿಸಿಲಿನಿಂದ ಬಸವಳಿದ ಬರದನಾಡಿನ ಜನರಿಗೆ ಫಲ ಪುಷ್ಪದ ರಸದೌತಣ ನೀಡುವ ಮೂಲಕ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಸ್ಫೂರ್ತಿ ತುಂಬ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv