ಕೊಪ್ಪಳ: ಜಿಲ್ಲೆಯ ಗವಿಸಿದ್ದೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶವನ್ನು ಏರ್ಪಡಿಸಿದ್ದು, ಕಲರ್ ಫುಲ್ ಹೂವುಗಳು ಕಣ್ಮನ ಸೆಳೆದಿವೆ.
ಗವಿಸಿದ್ದೇಶ್ವರ ಜಾತ್ರೆಯಲ್ಲಿ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿತ್ತು. ಪ್ರತಿವರ್ಷ ಜಾತ್ರೆಯಲ್ಲಿ ವಿಭಿನ್ನವಾಗಿ ಫಲಪುಷ್ಪ ಪ್ರದರ್ಶನ ನಡೆಯುತ್ತದೆ. ಈ ಬಾರಿಯೂ ಫಲಪುಷ್ಪ ಪ್ರದರ್ಶನ ಜನರ ಗಮನ ಸೆಳೆಯಿತು.
ತೆಪೋತ್ಸವ ಮಾದರಿ, ತಾಜ್ಮಹಲ್, ಅಣಬೆ ಕೃಷಿ, ಜೊತೆಗೆ ತೋಟಗಾರಿಕೆ ಇಲಾಖೆಯ ಯೋಜನೆ ಕುರಿತು ಜನರಲ್ಲಿ ಅರಿವು ಮೂಡಿಸುವ ನಾಮಫಲಕ ಅಳವಡಿಸಲಾಗಿತ್ತು. ಹಣ್ಣುಗಳಲ್ಲಿ ಜ್ಞಾನಪೀಠ ಪುರಸ್ಕೃತರ ಕೆತ್ತನೆ ಗಮನಸೆಳೆಯಿತು. ಜೊತೆಗೆ ಬಗೆಬಗೆಯ ಹೂವಿನ ಕಲಾಕೃತಿ ಕಣ್ಮನ ಸೆಳೆಯಿತು.
ಪ್ರತಿ ವರ್ಷ ಜಾತ್ರೆಯಲ್ಲಿ ಫಲಪುಷ್ಪ ಪ್ರದರ್ಶನ ಮೂರುದಿನ ನಡೆಯುತ್ತಿತ್ತು. ಆದರೆ ಈ ಬಾರಿ ಜನರ ರೆಸ್ಪಾನ್ಸ್ ಉತ್ತಮವಾಗಿರುವುದರಿಂದ ಐದು ದಿನ ಪ್ರದರ್ಶನ ನಡೆಯುತ್ತದೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ತೋಟಗಾರಿಕೆ ಇಲಾಖೆ ಯೋಜನೆ ಮಾಹಿತಿ ನೀಡಲು ಅನುಕೂಲವಾಗಿದೆ. ಇದರಿಂದ ಪ್ರೇರಿತರಾದ ರೈತರು ತೋಟಗಾರಿಕೆ ಬೆಳೆ ಬೆಳೆಯಲು ಪ್ರೋತ್ಸಾಹ ಸಿಗುತ್ತದೆ. ಈ ಮೇಳದಲ್ಲಿ ರೈತರಿಗೆ ಅಧಿಕಾರಿಗಳು ತಾಂತ್ರಿಕ ಮಾಹಿತಿ ಕೂಡ ನೀಡುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ನಜೀರ್ ಅಹ್ಮದ್ ಹೇಳಿದ್ದಾರೆ.
ಗವಿಸಿದ್ದೇಶ್ವರ ಜಾತ್ರೆಯಲ್ಲಿ ಫಲಪುಷ್ಪ ಪ್ರದರ್ಶನ ಭಕ್ತರನ್ನ ಆಕರ್ಷಿಸುತ್ತಿದ್ದು, ಪ್ರದರ್ಶನ ನೋಡಿರುವ ಭಕ್ತರು ತುಂಬಾ ಖುಷಿಪಡುತ್ತಿದ್ದಾರೆ.