ಹುಬ್ಬಳ್ಳಿ: 282 ರೈತರು ಬೆಳೆದ ವಿವಿಧ ಬಗೆಯ ಫಲಪುಷ್ಪಗಳ ಪ್ರದರ್ಶನಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಸಾಕ್ಷಿಯಾಗಿದೆ.
ಇಂದಿರಾ ಗಾಜಿನ ಮನೆಯಲ್ಲಿ ಒಂದು ಕಡೆ ಗುಲಾಬಿ, ಸೇವಂತಿಗೆ, ಕಾರ್ನೇಶನ್, ಅಂಥೋರಿಯಂ, ಗ್ಲ್ಯಾಡಿಯೋಲಸ್, ಲಿಲ್ಲಿ, ಜರ್ಬೆರಾ ಹೂಗಳಿತ್ತು. ಇನ್ನೋಂದೆಡೆ ನೂರಾರು ಬಗೆಯ ಹೂವುಗಳ ರಾಶಿ ನಡುವೆ ವಿಘ್ನ ನಿವಾರಕನ ಮೂರ್ತಿ ಕಂಗೊಳಿಸುತ್ತಿತ್ತು. ಮತ್ತೊಂದೆಡೆ ರಾಜು ಸೋನಾವನೆ ಎಂಬ ಕಲಾವಿದ ಕೈ ಚಳಕದಲ್ಲಿ ತಯಾರಾಗಿದ್ದ ವಿಮಾನ ನೋಡುಗರಿಗೆ ಆಕರ್ಷಿಸಿತ್ತು.
ಧಾರವಾಡ ತೋಟಗಾರಿಕೆ ಇಲಾಖೆ ಹು-ಧಾ ಮಹಾನಗರ ಪಾಲಿಕೆ ಸಹಯೋಗದಲ್ಲಿ ಮೂರು ದಿನಗಳ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಫಲ ಪುಷ್ಪ ಪ್ರದರ್ಶನಕ್ಕೆ ಕುಂದಗೋಳ ಶಾಸಕ ಸಿ.ಎಸ್ ಶಿವಳ್ಳಿ ಚಾಲನೆ ನೀಡಿ ವೀಕ್ಷಣೆ ಮಾಡಿದರು.
ಈ ಬಾರಿ ಪ್ರದರ್ಶನದ ಪ್ರಮುಖ ಆಕರ್ಷಣೆ ಎಂದರೆ ಹೂವಿನಲ್ಲಿಯೇ ವಿಮಾನ ತಯಾರು ಮಾಡಿರುವುದು. ಉಡಾನ್ ಯೋಜನೆಯಲ್ಲಿ ನಿತ್ಯ ಹತ್ತಾರು ವಿಮಾನಗಳು ಹುಬ್ಬಳ್ಳಿ ನೆತ್ತಿಯ ಮೇಲೆ ಹಾರಾಡುತ್ತಿದ್ದು, ಈ ವರ್ಷದ ಫಲಪುಷ್ಪ ಪ್ರದರ್ಶನದ ಥೀಮ್ ಆಗಿದೆ. ತೋಟಗಾರಿಕೆಗೆ ಉತ್ತೇಜನ ನೀಡಬೇಕು ಎಂಬ ಉದ್ದೇಶದಿಂದ ಈ ಬಾರಿ ಫ್ಲವರ್ ಶೋನಲ್ಲಿ, ಫಾಲಿ ಹೌಸ್, ತಾರಸಿ ತೋಟಗಾರಿಕೆ, ಹಾಗೂ ಅಣಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಅವುಗಳ ಕುರಿತು ಮಾಹಿತಿ ನೀಡಲಾಗುತ್ತದೆ.
ಕಲಾವಿದ ಇಸ್ಮಾಯಿಲ್ ತಲವಾಯಿ ಎಂಬವರು ಕಲ್ಲಂಗಡಿ ಹಣ್ಣಿನಲ್ಲಿ ಸಂಗೊಳ್ಳಿ ರಾಯಣ್ಣ, ಡಾ. ದ.ರಾ ಬೇಂದ್ರೆ, ಗಿರೀಶ್ ಕಾರ್ನಾಡ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಮಹನೀಯರ ಮೂರ್ತಿಗಳು ಅರಳಿದ್ದು ಜನರನ್ನು ಆಕರ್ಷಿಸುತ್ತಿವೆ. ಫಲಪುಷ್ಪ ಪ್ರದರ್ಶನದಲ್ಲಿ ಹೂಗಳು ತಮ್ಮ ಸೌಂದರ್ಯವನ್ನು ಜಗತ್ತಿಗೆ ತೋರಿಸುತ್ತಿದ್ದರೆ ಅವುಗಳನ್ನು ನೋಡಲು ಬರುವ ಯುವತಿಯರು ಅವುಗಳ ಅಂದ, ಬಣ್ಣ ನೋಡಿ ಜಗತ್ತನ್ನೇ ಮರೆಯುವ ಖುಷಿಯಲ್ಲಿದ್ದರು. ಅದರೊಂದಿಗೆ ಪ್ರತಿಯೊಂದು ಹೂವಿನ ಮುಂದೆ ನಿಂತುಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv