ಯಾದಗಿರಿ: ಜಿಲ್ಲೆಯಲ್ಲಿ ಮುಂಗಾರು ಅಬ್ಬರ ಜೋರಾಗಿದ್ದು, ಭೀಮಾ ನದಿ (Bhima River) ಅಪಾಯದಮಟ್ಟ ಮೀರಿ ಹರಿಯುತ್ತಿವೆ. ಹೀಗಾಗಿ ಪ್ರವಾಹದ ಆತಂಕ ಶುರುವಾಗಿದ್ದು, ಜಿಲ್ಲಾಡಳಿತ ನದಿಗಿಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಮಹಾರಾಷ್ಟ್ರ (Maharashtra) ಪಶ್ಚಿಮ ಘಟ್ಟಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣಕ್ಕೆ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಅತಂಕ ಶುರುವಾಗಿದೆ. ಹೀಗಾಗಿ ಯಾದಗಿರಿ ಜಿಲ್ಲೆಯ ಭೀಮಾ ನದಿಯ ತೀರದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಭತ್ತಿ ಹೋಗಿದ್ದ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ನದಿಯ ಭೋರ್ಗರೆತ ಹೆಚ್ಚಾಗಿದೆ.ಇದನ್ನೂ ಓದಿ: ಹಾಸನದಲ್ಲಿ ತಗ್ಗಿದ ಮಳೆ ಅಬ್ಬರ – ಹೇಮಾವತಿ ಒಳಹರಿವಿನಲ್ಲಿ ಇಳಿಕೆ
ಕಳೆದ ಒಂದು ವಾರದ ಹಿಂದಷ್ಟೇ ಸಂಪೂರ್ಣವಾಗಿ ಬರಿದಾಗಿದ್ದ ಭೀಮೆಯ ಒಡಲು ಭರ್ತಿಯಾಗಿದೆ. ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಭೋರ್ಗರೆತ ಹೆಚ್ಚಾಗಿದೆ. ಹೀಗಾಗಿ ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ. ನದಿಯ ಎಡ ಭಾಗದಲ್ಲಿ ಯಾದಗಿರಿ ತಾಲೂಕಿನ ಹತ್ತಾರು ಹಳ್ಳಿಗಳಿವೆ. ನದಿಯ ಬಲ ಭಾಗದಲ್ಲಿ ವಡಗೇರ ತಾಲೂಕಿನ ಹತ್ತಾರು ಹಳ್ಳಿಗಳ ಜನರಲ್ಲಿ ಪ್ರವಾಹದ ಆತಂಕ ಮನೆ ಮಾಡಿದ್ದು, ಗ್ರಾಮಸ್ಥರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ನದಿ ತೀರದ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಕಳೆದ ಎರಡು ದಿನಗಳಿಂದ ನದಿ ತೀರದ ಗ್ರಾಮಸ್ಥರಿಗೆ ಡಂಗೂರ ಹಾಗೂ ಮೈಕ್ಗಳ ಮೂಲಕ ಅನೌನ್ಸ್ಮೆಂಟ್ ಮಾಡಿ ನದಿ ದಡಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಸದ್ಯ ನದಿಗೆ ವಡಗೇರ ತಾಲೂಕಿನ ಗುರುಸಣಗಿ ಸೇತುವೆಯಿಂದ ಸುಮಾರು ಮೂರು ಸಾವಿರ ಕ್ಯುಸೆಕ್ನಷ್ಟು ನೀರು ಹರಿ ಬಿಡಲಾಗಿದೆ. ಹೀಗಾಗಿ ನದಿ ತೀರಕ್ಕೆ ಹೋಗದಂತೆ ಸೂಚನೆ ನೀಡಲಾಗಿದೆ. ಈ ಮಧ್ಯೆ, ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದರೂ ಸಹ ನದಿ ತೀರದಲ್ಲಿ ಮೀನು ಹಿಡಿಯುವ ಕೆಲಸಕ್ಕೆ ಮುಂದಾಗಿ ಹುಚ್ಚಾಟ ಮೆರೆಯುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಭೀಮಾ ನದಿಗೆ ಕಡಿಮೆ ನೀರಿದ್ದ ಸಮಯದಲ್ಲಿ ಮೀನು ಹಿಡಿಯಲು ಹೋಗಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದರು.ಇದನ್ನೂ ಓದಿ: MUDA Scam| ತನಿಖಾಧಿಕಾರಿ ಬದಲಾವಣೆಗೆ ನ್ಯಾಯಾಲಯಕ್ಕೆ ಅರ್ಜಿ