ಬೆಂಗಳೂರು: ಮುಂಬೈಗೆ ತೆರಳಬೇಕಿದ್ದ ವಿಮಾನ (Flight) ಸುಮಾರು 10 ಗಂಟೆಗೂ ಹೆಚ್ಚು ಕಾಲ ತಡವಾಗಿದ್ದರಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಸ್ಪೈಸ್ಜೆಟ್ (Spicejet) ಸಿಬ್ಬಂದಿ ವಿರುದ್ಧ ನೂರಾರು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಗಮ್ಯಸ್ಥಾನವನ್ನು ತಲುಪಲು ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೇ ಇದ್ದುದರಿಂದ ಆಕ್ರೋಶಗೊಂಡ ಪ್ರಯಾಣಿಕರು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.
ಬೆಂಗಳೂರು ವಿಮಾನ (Bengaluru Airport) ನಿಲ್ದಾಣದ ಗೇಟ್ನಲ್ಲಿ ತಾಂತ್ರಿಕ ದೋಷ ಉಂಟಾಗಿ ಸುಮಾರು 250 ಪ್ರಯಾಣಿಕರು ವಿಮಾನ ಹತ್ತಲು ತೊಂದರೆ ಅನುಭವಿಸಿದರು. ವಿಮಾನ ಬೆಳಗ್ಗೆ 6 ಗಂಟೆಗೆ ಹೊರಡಬೇಕಿತ್ತು. ಪ್ರಯಾಣಿಕರು ಆಗಲೇ ವಿಮಾನವನ್ನು ಏರಿದ್ದರು. ಆದರೆ ಪ್ರಯಾಣಿಕರು 2 ಗಂಟೆ ವಿಮಾನದಲ್ಲಿ ಕಳೆದ ಬಳಿಕ ಅಲ್ಲಿನ ಸಿಬ್ಬಂದಿ ತಾಂತ್ರಿಕ ದೋಷಗಳನ್ನು ಉಲ್ಲೇಖಿಸಿ ಪ್ರಯಾಣಿಕರನ್ನು ವಿಮಾನದಿಂದ ಕೆಳಗೆ ಇಳಿಸಿದ್ದಾರೆ.
ಪ್ರಯಾಣಿಕರು ಬೋರ್ಡಿಂಗ್ ಕೌಂಟರ್ಗೆ ಹಿಂತಿರುಗಿದ ನಂತರ ಸ್ಪೈಸ್ಜೆಟ್ ಸಿಬ್ಬಂದಿ ವಿಮಾನವನ್ನು ಮಧ್ಯಾಹ್ನ 12 ಗಂಟೆಗೆ ಮರು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಅನಂತರ ಅದನ್ನು ಮಧ್ಯಾಹ್ನ 3 ಗಂಟೆಗೆ ಮತ್ತು ಈಗ ರಾತ್ರಿ 8:30ಕ್ಕೆ ಬದಲಾಯಿಸಲಾಗಿದೆ. ಇದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ. ಇದನ್ನೂ ಓದಿ: ಕರ್ನಾಟಕದಿಂದ ಸೋನಿಯಾ ಗಾಂಧಿ ಸಂಸತ್ತಿಗೆ! – ಹೈಕಮಾಂಡ್ ಮುಂದೆ ಡಿಕೆಶಿ ಪ್ರಸ್ತಾಪ
ಸರಿಯಾದ ಮಾಹಿತಿ ನೀಡದ ಕಾರಣ ಪ್ರಯಾಣಿಕರು ವಿಮಾನ ವಿಳಂಬಕ್ಕೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಏರ್ಲೈನ್ಸ್ ಸಿಬ್ಬಂದಿ ವಿರುದ್ಧ ಗೇಟ್ ನಂಬರ್ 15 ರಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕರು ಕೂಡಲೇ ಪ್ರಯಾಣಕ್ಕೆ ಬೇರೆ ವಿಮಾನ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾರೆ.
ಬೆಂಗಳೂರಿನಿಂದ ಮುಂಬೈಗೆ ಸ್ಪೈಸ್ಜೆಟ್ ವಿಮಾನ ವಿಳಂಬವಾಗಿದ್ದು ನಮ್ಮ ಮಾತು ಕೇಳಲು ಇಲ್ಲಿ ಯಾರೂ ಇಲ್ಲ ಎಂದು ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಸ್ಪೈಸ್ಜೆಟ್ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಇದನ್ನೂ ಓದಿ: ಚಂಡಮಾರುತಕ್ಕೆ ಬಾಲಿವುಡ್ ನಟ ಆಮೀರ್ ಸಿಲುಕಿದ್ದು ಹೇಗೆ?