ಬೆಂಗಳೂರು: ಅಖಿಲೇಶರಿಗೆ ತಂದೆ ಮುಲಾಯಂ ಸಿಂಗ್ ಯಾದವ್ ಅವರು ಕಾಂಗ್ರೆಸ್ ಜೊತೆ ಹೋಗಬೇಡ ಅಂದ್ರು ಕೇಳಲಿಲ್ಲ. ಈಗ ಯಾರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಸಹವಾಸ ಮಾಡುತ್ತಾರೋ ಅವರು ಧೂಳಿಪಟ ಆಗ್ತಾರೆ ಎಂದು ಅಖಿಲೇಶ್ ಯಾದವ್ರ ವಿಚಾರದಲ್ಲಿ ಸಾಬೀತಾಗಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅನಂತ್ಕುಮಾರ್ ಅವರು ಪಂಚ ರಾಜ್ಯ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಉತ್ತರಪ್ರದೇಶ ರಾಜ್ಯದಲ್ಲಿ ನಮ್ಮದು ಅಭೂತಪೂರ್ವ ಗೆಲವು. ಜನರು ಮೋದಿಯವರ ಆಡಳಿತವನ್ನು ಒಪ್ಪಿದ್ದಾರೆ. ಭ್ರಷ್ಟಾಚಾರ ರಹಿತ, ಜನರ ಕಲ್ಯಾಣ ನಮ್ಮ ಪಕ್ಷದ ಉದ್ದೇಶ. ಹಾಗಾಗಿ ಜನರು ಜಾತಿ- ಬೇಧ ಮರೆತು ಮೋದಿ ಅವರ ಆಡಳಿತಕ್ಕೆ ಮನಸೋತು ಮತದಾನ ಮಾಡಿದ್ದಾರೆ ಎಂದು ತಿಳಿಸಿದರು.
ಸಮಾಜವಾದಿ ಪಾರ್ಟಿ ಹಾಗು ಬಹುಜನ ಸಮಾಜವಾದಿ ಪಾರ್ಟಿಗಳು ಗೂಂಡಾಗಿರಿಗೆ, ಭ್ರಷ್ಟಾಚಾರಕ್ಕೆ ಸಂಕೇತವಾಗಿವೆ. ನಮಗೆ ಗೂಂಡಾಗಿರಿ ಆಡಳಿತ ಹಾಗೂ ಭ್ರಷ್ಟಾಚಾರ ಆಡಳಿತ ಬೇಡ, ನಮಗೆ ಒಳ್ಳೆಯ ಆಡಳಿತ, ಜನಕಲ್ಯಾಣ ಆಡಳಿತದ ಪಕ್ಷ ಬೇಕೆಂದು ಉತ್ತರಾಖಂಡ್ ಮತ್ತು ಉತ್ತರಪ್ರದೇಶದ ಜನರು ಮೋದಿ ನೇತೃತ್ವದ ಪಕ್ಷವನ್ನು ಮುನ್ನಡಿಸುವ ಮೂಲಕ ವಿಜಯಪತಾಕೆ ಹಾರುವಂತೆ ಮಾಡಿದ್ದಾರೆ ಎಂದು ಅನಂತ್ ಕುಮಾರ್ ಪಕ್ಷದ ಗೆಲುವುನ್ನ ಹಂಚಿಕೊಂಡರು.
2014ರಲ್ಲಿ ಮೋದಿ ಹಾಗು ಅಮೀತ್ ಶಾ ನೇತೃತ್ವದಲ್ಲಿ ಉತ್ತರಪ್ರದೇಶದ 80 ಲೋಕಸಭಾ ಸ್ಥಾನಗಳಲ್ಲಿ 71 ರಲ್ಲಿ ಗೆಲುವು ಸಾಧಿಸಿದ್ದೇವು. ಈಗ ಅದೇ ರೀತಿ ವಿಧಾನಸಭಾ ಚುನಾವಣೆಯಲ್ಲಿ ಮುನ್ನಡೆಯನ್ನು ಸಾಧಿಸಿದ್ದೇವೆ ಎಂದು ಹೇಳಿದರು.
ಕುಟುಂಬ ರಾಜಕಾರಣ ಇಲ್ಲ: ನಮ್ಮದು ಏಕಶಿಲೆಯ ಪಾರ್ಟಿ, ಪ್ರಜಾತಾಂತ್ರಿಕ ಪಾರ್ಟಿ, ಪಕ್ಷ ಕಲೆ ನಿಯಮಗಳಿಗೆ ಬದ್ಧವಾಗಿದೆ. ಕಾಂಗ್ರೆಸ್ನ ಹಾಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರೈವೇಟ್ ಲಿಮೆಟೆಡ್ ಅಲ್ಲ ಮತ್ತು ಸಮಾಜವಾದಿ ಪಾರ್ಟಿ ಅಂತೆ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಪ್ರೈವೇಟ್ ಲಿಮಿಟೆಡ್ ಅಲ್ಲ. ನಮ್ಮಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂದರು.
ಬಿಎಸ್ವೈ ಸಿಎಂ: ಕರ್ನಾಟಕದಲ್ಲಿಯೂ ಸಹ ಮುಂದಿನ ಚುನಾವಣೆಯಲ್ಲಿ ನಾವು ಮೋದಿ ಹಾಗು ರಾಜ್ಯಧ್ಯಾಕ್ಷ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ. ಸಿದ್ದರಾಮಯ್ಯನವರು ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅವರ ಪಕ್ಷದಲ್ಲಿ ಭ್ರಷ್ಟಾಚಾರ ಬೇರೂರಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚಿಸಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.