ದಾವಣಗೆರೆ: ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ಆಮಿಷವೊಡ್ಡಿ ನಕಲಿ ಚಿನ್ನದ ನಾಣ್ಯ ನೀಡಿದ ಐವರು ವಂಚಕರ ತಂಡ ಲಕ್ಷಾಂತರ ರೂ. ವಂಚಿಸಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಕುಳೇನೂರು ರಸ್ತೆಯಲ್ಲಿ ಘಟನೆ ನಡೆದಿದೆ. ವಂಚಕರ ತಂಡವೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಹ್ಲಾದ್ ಎಂಬುವರ ಮೇಲೆ ಹಲ್ಲೆ ನಡೆಸುವ ಮೂಲಕ 7.50 ಲಕ್ಷ ನಗದು, ಒಂದು ಚಿನ್ನದ ಸರ, ಎರಡು ಚಿನ್ನದ ಉಂಗುರ ಹಾಗೂ ಮೊಬೈಲ್ ಕಸಿದು ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ಅಶ್ವಥ್ ನಾರಾಯಣ ಒಬ್ಬ ಕಚಡ, ಮಾರ್ಕ್ಸ್ಕಾರ್ಡ್ ಮಾರ್ಕೊಂಡು ಬದುಕಿದವನು: ಡಿ.ಕೆ.ಸುರೇಶ್ ವಾಗ್ದಾಳಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ನಿವಾಸಿಯಾಗಿರುವ ಪ್ರಹ್ಲಾದ್ ಅವರಿಗೆ 10 ದಿನಗಳ ಹಿಂದೆ ಕರೆ ಮಾಡಿದ್ದ ರಮೇಶ್ ಉಡುಪಿಯ ಹೆಬ್ರಿಯಲ್ಲಿ ಮೂರು ವರ್ಷಗಳ ಹಿಂದೆ ವಸತಿ ಗೃಹವೊಂದರಲ್ಲಿ ಪರಿಚಿತರಾಗಿದ್ದಾಗಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಹ್ಲಾದ್, ಪರಿಚಯವಾಗಿದ್ದು ನೆನಪಿಲ್ಲ ಎಂದು ಹೇಳಿ ಕರೆ ಕಟ್ ಮಾಡಿದ್ದಾರೆ. ಮತ್ತೆ ಮತ್ತೆ ಕರೆ ಮಾಡಿದ ರಮೇಶ್, ನನ್ನ ಬಳಿ ಅರ್ಧ ಕೆ.ಜಿ. ಚಿನ್ನದ ನಾಣ್ಯಗಳಿವೆ. ಯಾರಿಗಾದರೂ ಕೊಡಿಸಿ ಅಥವಾ ನೀವೇ ಕೊಂಡುಕೊಳ್ಳಿ. ಕಡಿಮೆ ಬೆಲೆಗೆ ಕೊಡುತ್ತೇನೆ ಎಂದು ಆಮಿಷವೊಡ್ಡಿದ್ದಾರೆ.
ಪ್ರಹ್ಲಾದ್ ಜೂನ್ 5 ರಂದು ಕುಳೇನೂರು ರಸ್ತೆಗೆ ಬಂದು ರಮೇಶ್ ಅವರನ್ನು ಭೇಟಿಯಾಗಿ ಎರಡು ಚಿನ್ನದ ನಾಣ್ಯ ಪಡೆದು ಬೆಂಗಳೂರಿಗೆ ತೆರಳಿ ಪರೀಕ್ಷಿಸಿ ನೋಡಿದಾಗ ಅಸಲಿ ಚಿನ್ನ ಎಂದು ಖಾತರಿಯಾಗಿತ್ತು. ಈ ಹಿನ್ನೆಲೆಯಲ್ಲಿ ರಮೇಶ್ಗೆ ಕರೆ ಮಾಡಿ 8 ಲಕ್ಷಕ್ಕೆ ಅರ್ಧ ಕೆ.ಜಿ. ಚಿನ್ನದ ನಾಣ್ಯಗಳನ್ನು ನೀಡುವಂತೆ ತಿಳಿಸಿದ್ದರು. ಇದನ್ನೂ ಓದಿ: ಅಶ್ವಥ ಎಲೆಯಲ್ಲಿ ಮೂಡಿದ ಮಾಸ್ಟರ್ ಬ್ಲಾಸ್ಟರ್ – ಎಕ್ಸ್ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಪುಟ ಸೇರಿದ ಉಡುಪಿಯ ಮಹೇಶ್
ಜೂನ್ 12 ರಂದು ಸಂಜೆ 6.30ರ ವೇಳೆಗೆ 7.50 ಲಕ್ಷ ತೆಗೆದುಕೊಂಡು ಕುಳೇನೂರು ರಸ್ತೆಗೆ ಬಂದಿದ್ದ ಪ್ರಹ್ಲಾದ್ ಅವರನ್ನು ರಮೇಶ್ ಸೇರಿದಂತೆ ಐವರು ಭೇಟಿ ಮಾಡಿ ಹಣ ಪಡೆದು ನಾಣ್ಯಗಳನ್ನು ನೀಡಿ ಚಿನ್ನದ್ದು ಎಂದು ನಂಬಿಸಲು ಯತ್ನಿಸಿದ್ದಾರೆ. ನಾಣ್ಯಗಳನ್ನು ಸ್ಥಳದಲ್ಲೇ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಅವು ನಕಲಿ ಎಂಬ ಅನುಮಾನ ಮೂಡಿ ಖರೀದಿಗೆ ನಿರಾಕರಿಸಿದ ಪ್ರಹ್ಲಾದ್ ಮೇಲೆ ಎಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ, 60,000 ರೂ. ಮೌಲ್ಯದ ಚಿನ್ನದ ಸರ, 43,000 ರೂ. ಮೌಲ್ಯದ ಎರಡು ಚಿನ್ನದ ಉಂಗುರಗಳು ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.