ರಾಮನಗರ: ಮಾಜಿ ಸಚಿವ, ಕನಕಪುರ ಬಂಡೆ ಡಿಕೆ ಶಿವಕುಮಾರ್ ಅವರ ಕನಕಪುರ ಕ್ಷೇತ್ರದ ಕನಕಪುರ ನಗರಸಭೆಗೆ ನಡೆದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯೊಬ್ಬರು ಗೆಲವು ಸಾಧಿಸಿದ್ದಾರೆ.
ಕನಕಪುರದ ನಗರಸಭೆಯ 26 ನೇ ವಾರ್ಡ್ ವಿವೇಕಾನಂದ ನಗರದ ಬಿಜೆಪಿ ಅಭ್ಯರ್ಥಿ ಮಾಲತಿ ಗೆಲುವು ಸಾಧಿಸಿದ್ದಾರೆ. ತಮ್ಮ ಎದುರು ಸ್ಪರ್ಧಿಸಿದ್ದ ಕಾಂಗ್ರೆಸ್ನ ಅಭ್ಯರ್ಥಿ ಗೌರಮ್ಮ ವಿರುದ್ಧ 136 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಅದರಲ್ಲೂ ಡಿಕೆ ಶಿವಕುಮಾರ್ ರವರ ಅಡ್ಡದಲ್ಲಿ ಕಮಲದ ಅಭ್ಯರ್ಥಿ ಗೆಲುವು ಸಾಧಿಸಿರುವುದು ಸಾಕಷ್ಟು ಅಚ್ಚರಿಯನ್ನುಂಟು ಮಾಡಿದೆ. ವಾರ್ಡ್ ನಂಬರ್ 26 ರಲ್ಲಿ ಹೆಚ್ಚಿನದಾಗಿ ನೇಕಾರರು ಹಾಗೂ ಲಿಂಗಾಯತ ಮತದಾರರೇ ಇರುವುದು ಬಿಜೆಪಿ ಗೆಲುವಿಗೆ ಸಹಕಾರಿಯಾಗಿದೆ.
ಈ ವೇಳೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಮಾಲತಿಯವರು, ಕಾಂಗ್ರೆಸ್ ವಿರುದ್ಧ ಮೊದಲ ಬಾರಿ ಗೆಲುವು ಸಾಧಿಸಿದ್ದು ನನಗೆ ಬಹಳ ಸಂತೋಷವಾಗಿದೆ. ನಾನು ಜನ ಸೇವೆ ಮಾಡಲು ಚುನಾವಣೆಗೆ ನಿಂತಿದ್ದೆ. ಜನರು ಆಶೀರ್ವಾದ ಮಾಡಿದ್ದಾರೆ. ಜನರಿಗಾಗಿ ಒಳ್ಳೆಯ ಕೆಲಸ ಮಾಡುತ್ತೇನೆ ನನ್ನ ನಂಬಿ ಗೆಲ್ಲಿಸಿದ ಜನರಿಗೆ ಧನ್ಯವಾದಗಳೂ ಎಂದು ಹೇಳಿದ್ದಾರೆ.