ಯುವರಾಜ್ಕುಮಾರ್ (Yuvarajkumar) ಹಬ್ಬಕ್ಕೆ ಕ್ಷಣ ಗಣನೆ ಶುರುವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಯುವ ಸಿನಿಮಾದ ಮೊದಲ ಹಾಡು (Song) ಹೊರಬರಲಿದೆ. ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಅಣ್ಣಾವ್ರ ಮೂರನೇ ತಲೆಮಾರಿನ ಹೊಸ ಕುಡಿಯ ಮೊದಲ ಹಾಡು ಹೇಗಿರಲಿದೆ? ಅದ್ಯಾವ ರೀತಿ ಕರುನಾಡಿನಲ್ಲಿ ಮೆರವಣಿಗೆ ಹೊರಡಲಿದೆ? ಅದನ್ನು ಬರೆದಿದ್ದು ಯಾರು? ಯಾವ ದಿನ, ಯಾವ ಕ್ಷಣ ಈ ಮಣ್ಣಿನಲ್ಲಿ ದಿಬ್ಬಣ ಹೊರಡಲಿದೆ? ಅದರ ಎಕ್ಸ್ಕ್ಲೂಸಿವ್ ಮಾಹಿತಿ ಇಲ್ಲಿದೆ.
ಯುವರಾಜ್ಕುಮಾರ್ ದೊಡ್ಡಮನೆಯ ಹೊಸ ಕುಡಿ. ಅಣ್ಣಾವ್ರ ಮೊಮ್ಮಗ. ರಾಘಣ್ಣನ ಎರಡನೇ ಮಗ. ಅಪ್ಪು ಚಿಕ್ಕಪ್ಪನ ಅಕ್ಕರೆಯ ಕೂಸು ಈ ಯುವರಾಜ್ಕುಮಾರ್. ಅಪ್ಪು ನಮ್ಮನ್ನು ಬಿಟ್ಟು ಹೋದ ಮೇಲೆ ಯಾರು ಆ ಸ್ಥಾನ ತುಂಬುತ್ತಾರೆ ? ಹೇಗೆ ನಮ್ಮನ್ನು ರಂಜಿಸುತ್ತಾರೆ ? ಇದನ್ನೇ ಎಲ್ಲರೂ ಕೇಳುತ್ತಿದ್ದರು. ಅದಕ್ಕೆ ಉತ್ತರ ಸಿಗುವ ಸಮಯ ಬಂದಿದೆ. ಮಾರ್ಚ್ 29ಕ್ಕೆ ಯುವ (Yuva) ಸಿನಿಮಾ ಕರುನಾಡಿನಲ್ಲಿ ರಣಕೇಕೆ ಹಾಕಲಿದೆ. ಪ್ರತಿ ಮನೆ ಮನ ಇದಕ್ಕಾಗಿ ಜಪ ಮಾಡುತ್ತಿವೆ.
ಈ ಹೊತ್ತಲ್ಲಿ ಇದರ ಮೊದಲ ಹಾಡು ಹಾಜರಾಗಲಿದೆ. ಅದೇ `ಒಬ್ಬನೇ ಶಿವ…ಒಬ್ಬನೇ ಯುವ…’ ಈ ಸಾಲನ್ನು ಕೇಳಿದಾಗಲೇ ಜನರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಹಾಡು ಬಂದ ಮೇಲೆ ಇನ್ನೇನು ದೀಪಾವಳಿಯೋ? ಒಬ್ಬನೇ ಶಿವ…ಒಬ್ಬನೇ ಯುವ…ಇದು ಮೊದಲ ಸಾಲು. ಇದರ ಪ್ರೊಮೊ ಕೂಡ ಬಿಟ್ಟಿಲ್ಲ. ಸಣ್ಣ ಝಲಕ್ ಕೂಡ ತೋರಿಸಿಲ್ಲ. ಇದನ್ನು ಯಾರು ಬರೆದಿದ್ದಾರೆ ? ಬಹುಶಃ ಸಂತೋಷ್ ಆನಂದ್ರಾಮ್ (Santhosh Anand Ram) ಇರಬೇಕು. ಗೊತ್ತಿಲ್ಲ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಮಾರ್ಚ್ ಎರಡನೇ ತಾರೀಖು ಬೆಳಿಗ್ಗೆ ಈ ಹಾಡು ಲೋಕಾರ್ಪಣೆಯಾಗಲಿದೆ.
ಒಬ್ಬನೇ ಶಿವ…ಒಬ್ಬನೇ ಯುವ. ಇದರ ನಂತರ ಇನ್ನೇನು ಬರೆದಿದ್ದಾರೆ ಗೀತ ರಚನೆಕಾರ? ಅದ್ಯಾವ ರೀತಿ ಹೊಸ ಹೀರೋಗೆ ಸಾಲನ್ನು ಹೊಸೆದಿದ್ದಾರೆ? ಅಪ್ಪುವನ್ನು ನೆನೆಸಿಕೊಂಡು ಜನರು ಕೇಕೆ ಹಾಕುವಂತೆ ಮಾಡಲಿದ್ದಾರೆ? ಎಲ್ಲವೂ ಕುತೂಹಲಕಾರಿ. ಅದಕ್ಕಾಗಿ ನಾವು ಕಾಯಬೇಕಷ್ಟೇ…
ಯುವರಾಜ್ಕುಮಾರ್ ದೇವರ ಮುಂದೆ ತುಪ್ಪದ ದೀಪ ಹಚ್ಚಿ ಕೈ ಮುಗಿದು ನಿಂತಿದ್ದಾರೆ. ಅಪ್ಪು ಇಲ್ಲ…ಅವರು ಬಿಟ್ಟು ಹೋದ ಸಿಂಹಾಸನದಲ್ಲಿ ನೀವೇ ಕೂಡಬೇಕು…ಹೀಗಂತ ಕರುನಾಡಿನ ಮನಸುಗಳು ಬಯಸುತ್ತಿವೆ. ಕೂಗುತ್ತಿವೆ. ಗರ್ಜಿಸುತ್ತಿವೆ. ಅದನ್ನು ನಿಜ ಮಾಡಬೇಕು. ಅದನ್ನು ಸಾಬೀತು ಪಡಿಸಬೇಕು. ಅದಕ್ಕಾಗಿಯೇ ಯುವ ಎದೆ ಉಬ್ಬಿಸಿ ನಿಂತಿದ್ದಾರೆ. ಸೇಮ್ ಟೈಮ್ ವಿನೀತರಾಗಿ ಬೆಳ್ಳಿ ತೆರೆ ಮೇಲೆ ಬರಲು ಮೈ ಕೊಡವಿದ್ದಾರೆ. ಅಪ್ಪು ಅಲ್ಲಿಂದಲೇ ಎರಡೂ ಕೈಗಳಿಂದ ಆಶೀರ್ವಾದ ಮಾಡಿದ್ದಾರೆ. ಸಂತೋಷ್ ಆನಂದ್ರಾಮ್ ಮತ್ತು ಹೊಂಬಾಳೆ ಸಂಸ್ಥೆ ಹೆಗಲು ಕೊಟ್ಟಿದೆ. ಇನ್ನೇನು ಬೇಕು ? ಮೆಗಾ ಪವರ್ಸ್ಟಾರ್ ದರ್ಬಾರ್ ಹಬ್ಬ ಮಾಡಲಿದೆ.