ಕಾಬೂಲ್: ಭೀಕರ ಭೂಕಂಪದಿಂದ ತತ್ತರಿಸಿರುವ ಅಫ್ಘಾನಿಸ್ತಾನದ ಜನತೆಗೆ ಭಾರತ ನೆರವಿನ ಹಸ್ತ ಚಾಚಿದೆ. ಭಾರತವು ಶುಕ್ರವಾರ ಎರಡನೇ ಬಾರಿಗೆ ಅಗತ್ಯ ವಸ್ತುಗಳನ್ನು ಅಫ್ಘಾನ್ ಸಂತ್ರಸ್ತರಿಗಾಗಿ ರವಾನಿಸಿದೆ.
ಅಫ್ಘಾನಿಸ್ತಾನದ ಪೂರ್ವ ಭಾಗದಲ್ಲಿ ಭಾರಿ ಭೂಕಂಪ ಸಂಭವಿಸಿ 1,000ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದೆ. ಭೂಕಂಪದಿಂದಾಗಿ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ನೆರವು ನೀಡಲು ಭಾರತ ಮುಂದಾಗಿದ್ದು, ಈಗಾಗಲೇ ತಂಡವೊಂದು ಕಾಬೂಲ್ ತಲುಪಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಕುರಿತು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭೂಕಂಪ – 280 ಸಾವು, 250ಕ್ಕೂ ಹೆಚ್ಚು ಜನರಿಗೆ ಗಾಯ
ರಿಡ್ಜ್ ಟೆಂಟ್ಗಳು, ಸ್ಲೀಪಿಂಗ್ ಬ್ಯಾಗ್ಸ್, ಹೊದಿಕೆಗಳು, ಸ್ಲೀಪಿಂಗ್ ಮ್ಯಾಟ್ ಸೇರಿದಂತೆ ಇತ್ಯಾದಿ ಅಗತ್ಯ ವಸ್ತುಗಳನ್ನು ಅಪ್ಘಾನ್ ಜನತೆಗೆ ನೆರವಿಗಾಗಿ ರವಾನಿಸಲಾಗಿದೆ. ಪರಿಹಾರ ಸರಕನ್ನು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (UNOCHA) ಮತ್ತು ಕಾಬೂಲ್ನಲ್ಲಿರುವ ಅಫ್ಘಾನ್ ರೆಡ್ ಕ್ರೆಸೆಂಟ್ ಸೊಸೈಟಿ (ARCS)ಗೆ ಹಸ್ತಾಂತರಿಸಲಾಗುವುದು.
India, a true first responder. https://t.co/riXkZlzwxC
— Dr. S. Jaishankar (@DrSJaishankar) June 23, 2022
ಜೂನ್ 22, 2022 ರಂದು ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟರು, ಸಾವಿರಾರು ಮಂದಿ ತೊಂದರೆಗೆ ಸಿಲುಕಿದ್ದಾರೆ. ಸಂತ್ರಸ್ತರಿಗಾಗಿ ಭಾರತ ಸರ್ಕಾರವು ಎರಡು ವಿಮಾನಗಳಲ್ಲಿ 27 ಟನ್ ತುರ್ತು ಪರಿಹಾರ ರವಾನಿಸಿದೆ ಎಂದು ಎಂಇಎ ತಿಳಿಸಿದೆ. ಇದನ್ನೂ ಓದಿ: ಆಫ್ಘನ್ನಲ್ಲಿ ಭೂಕಂಪ – ಮೃತರ ಸಂಖ್ಯೆ 1,000ಕ್ಕೆ ಏರಿಕೆ; ಸಂತ್ರಸ್ತರಿಗೆ ನೆರವು ನೀಡ್ತೀವಿ ಎಂದ ತಾಲಿಬಾನ್
ಅಫ್ಘಾನಿಸ್ತಾನಕ್ಕೆ ಮಾನವೀಯ ಸಹಾಯ ಒದಗಿಸಲು ತನ್ನ ತಾಂತ್ರಿಕ ತಂಡವನ್ನು ಕಳುಹಿಸಿದ ಭಾರತದ ನಿರ್ಧಾರವನ್ನು ತಾಲಿಬಾನ್ ಸ್ವಾಗತಿಸಿದೆ. ಸಂಕಷ್ಟಕ್ಕೆ ಸಿಲುಕಿರುವ ಆಫ್ಘನ್ನರ ರಕ್ಷಣೆಗೆ ರಾಜತಾಂತ್ರಿಕರು ಮತ್ತು ತಾಂತ್ರಿಕ ತಂಡವನ್ನು ಕಾಬೂಲ್ನಲ್ಲಿರುವ ರಾಯಭಾರಿ ಕಚೇರಿಗೆ ಕಳುಹಿಸಿರುವ ಭಾರತದ ನಿರ್ಧಾರ ಸ್ವಾಗತಾರ್ಹ ಎಂದು ತಾಲಿಬಾನ್ ವಕ್ತಾರ ಅಬ್ದುಲ್ ಕಹರ್ ಬಾಲ್ಚಿ ತಿಳಿಸಿದ್ದಾರೆ.