ಚಿಕ್ಕಮಗಳೂರು: ಕಾಫಿನಾಡಿನ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಮಟ್ಟದ ಗೌಡ್ತಿಯರ ಟೆನಿಸ್ ಬಾಲ್ ಕ್ರಿಕೆಟ್ ಪ್ರಿಮಿಯರ್ ಲೀಗ್ ಆಯೋಜಿಸಲಾಗಿದೆ. ಒಕ್ಕಲಿಗ ಸಮುದಾಯದ ಯುವತಿಯರು ಬ್ಯಾಟ್ ಬೀಸಿ, ಬೌಲಿಂಗ್ ಮಾಡಿ ನಾವೇನು ಕಮ್ಮಿ ಎಂದು ಯುವಕರು ನಾಚಿಸುವಂತೆ ಆಟವಾಡುತ್ತಿದ್ದಾರೆ.
ನಗರದ ಸುಭಾಷ್ ಚಂದ್ರಬೋಸ್ ಮೈದಾನದಲ್ಲಿ ಇಂದು (ಶನಿವಾರ) ಮತ್ತೆ ನಾಳೆ ಗೌಡ್ತಿಯರ ಕ್ರಿಕೆಟ್ ಪಂದ್ಯ ನಡೆಯಲಿದೆ. ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸಿದ್ದು, ಕಾಫಿನಾಡ ಇತಿಹಾಸದಲ್ಲೇ ಮೊದಲ ಬಾರಿಗೆ ಗೌಡ್ತಿಯರಿಗಾಗಿಯೇ ಕ್ರಿಕೆಟ್ ಆಯೋಜನೆಗೊಂಡಿದೆ. ರಾಜ್ಯದ ನಾನಾ ಭಾಗಗಳಿಂದ ಗೌಡ್ತಿಯರು ಪಂದ್ಯಕ್ಕೆ ಆಗಮಿಸಿದ್ದಾರೆ.
ಸ್ಥಳೀಯವಾಗಿ ಈವರೆಗೂ ಮಹಿಳೆಯರಿಗೆ ಎಲ್ಲೂ ಟೂರ್ನಿಮೆಂಟ್ ಆಯೋಜಿಸಿರಲಿಲ್ಲ. ಹಾಗಾಗಿ, ಇದೇ ಮೊದಲ ಬಾರಿಗೆ ಆಯೋಜಿಸಲಾಗಿದೆ. ಚಿಕ್ಕಮಗಳೂರು ಒಂದರಲ್ಲೇ ಆಟಗಾರ್ತಿಯರು ಸಿಗುವುದು ಕಷ್ಟ ಎಂದು ರಾಜ್ಯ ಮಟ್ಟದಲ್ಲಿ ಆಯೋಜಿಸಲಾಗಿದೆ ಎನ್ನುವುದು ಆಯೋಜಕರ ಮಾತಾಗಿದೆ. ಇನ್ನೂ ಆಟಗಾರ್ತಿಯರು ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಿ ಮಿಂಚುತ್ತಿದ್ದಾರೆ.
ಒಟ್ಟು 8 ತಂಡಗಳು ಹೆಸರನ್ನು ನೊಂದಾಯಿಸಿಕೊಂಡಿದ್ದು, ಚಿಕ್ಕಮಗಳೂರಿನ ಐದು ತಂಡದ ಜೊತೆ ಬೆಂಗಳೂರು, ಮೈಸೂರು ಹಾಗೂ ಮಡಿಕೇರಿಯಿಂದಲೂ ತಂಡಗಳೂ ಭಾಗವಹಿಸಿವೆ. ಯುವತಿಯರು, ಮಹಿಳೆಯರು ತಂಡ ಮಾಡಿಕೊಂಡು ಪಂದ್ಯದಲ್ಲಿ ಪಾಲ್ಗೊಂಡಿದ್ದಾರೆ.
ಮೊದಲ ಬಹುಮಾನ 1 ಲಕ್ಷ ರೂ. 2ನೇ ಬಹುಮಾನ 70,೦೦೦ ರೂ. 3ನೇ ಬಹುಮಾನ 50,೦೦೦ ರೂ. ಮತ್ತು 4ನೇ ಬಹುಮಾನ 25,೦೦೦ ರೂ. ಇರಲಿದೆ.