ಬೆಂಗಳೂರು: ಇಡೀ ಜಗತ್ತನ್ನೇ ತಲೆಕೆಳಗೆ ಮಾಡಿಬಿಟ್ಟಿದ್ದ ಕೊರೋನಾ (Corona) ರೀ ಎಂಟ್ರಿ ಕೊಟ್ಟಿದ್ದು, ಮತ್ತೆ ಆತಂಕ ಮನೆ ಮಾಡಿದೆ. ಇದೀಗ ಕೋವಿಡ್ (Covid) ಸೋಂಕಿಗೆ ತುತ್ತಾಗಿ ವೃದ್ಧ ಬಲಿಯಾದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಬೆಂಗಳೂರಿನ ವೈಟ್ಫೀಲ್ಡ್ ಮೂಲದ 84 ವರ್ಷದ ವೃದ್ಧ ಉಸಿರಾಟದ ಸಮಸ್ಯೆ ಹಾಗೂ ಅಂಗಾಂಗ ವೈಫಲ್ಯ ಖಾಯಿಲೆಗಳಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಸಹ ಕೋವಿಡ್ಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೇ 17ರಂದು ಕೋವಿಡ್ಗೆ ವೃದ್ಧ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು 108 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಈ ಪೈಕಿ ಐವರಿಗೆ ಕೋವಿಡ್ ಪಾಸಿಟಿವ್ ಬಂದಿದೆ.
ಇಂದು ಬೆಂಗಳೂರಲ್ಲಿ 2, ಮೈಸೂರು 2 ಹಾಗೂ ವಿಜಯನಗರದಲ್ಲಿ ಒಂದು ಕೋವಿಡ್ ಕೇಸ್ ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು 38 ಸಕ್ರಿಯ ಕೋವಿಡ್ ಕೇಸ್ ದಾಖಲಾಗಿದೆ. ಬೆಂಗಳೂರಿನಲ್ಲಿ 9 ತಿಂಗಳ ಮಗು ಸೇರಿ ಒಟ್ಟು ಮೂರು ಜನ ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಸದ್ಯ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: 25,000 ರೂ.ಗೆ ಜೀತಕ್ಕಿರಿಸಿದ್ದ ಮಗ ಸಾವು – ರಹಸ್ಯವಾಗಿ ಸಮಾಧಿಯಲ್ಲಿ ಹೂತಿಟ್ಟಿದ್ದ ಮಾಲೀಕ ಅರೆಸ್ಟ್
ಬೆಳಗಾವಿ ಜಿಲ್ಲೆಗೆ ಕೊರೋನಾ ಕಾಲಿಟ್ಟಿದ್ದು, 25 ವರ್ಷದ ಗರ್ಭಿಣಿಯಲ್ಲಿ ವೈರಸ್ ಕಾಣಿಸಿಕೊಂಡಿದೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ ಅಂತ ಬೆಳಗಾವಿ ಡಿಎಚ್ಒ ಡಾ.ಈಶ್ವರ್ ಗಡಾದಿ ಮಾಹಿತಿ ನೀಡಿದ್ದಾರೆ. ಇನ್ನು ಕೊರೋನಾ ಕಾಣಿಸಿಕೊಂಡ ಹಿನ್ನೆಲೆ ಬಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಪ್ರತ್ಯೇಕ 10 ಬೆಡ್ಗಳ ವಾರ್ಡ್ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಮವಾರದಿಂದ ಕೋವಿಡ್ ಪರೀಕ್ಷೆ ಆರಂಭಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಕನ್ನಡದ ರಜನಿ ಸಿನಿಮಾ ಖ್ಯಾತಿಯ ಮುಕುಲ್ ದೇವ್ ನಿಧನ
ಕೊರೋನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಇದನ್ನೂ ಓದಿ: Bengaluru | ಅಕ್ರಮವಾಗಿ ನಾಡ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ರೌಡಿಶೀಟರ್ ಬಂಧನ
ಮುಂಜಾಗ್ರತಾ ಕ್ರಮ ಏನು?
*ಗರ್ಭಿಣಿಯರು, ಮಕ್ಕಳು ಮತ್ತು ಕೋಮಾರ್ಬಿಡ್ ವ್ಯಕ್ತಿಗಳು ಮಾಸ್ಕ್ ಧರಿಸಿದ್ರೆ ಒಳ್ಳೆದು.
*ಗುಂಪು ಪ್ರದೇಶಗಳಲ್ಲಿ ಮಾಸ್ಕ್ ಹಾಕಿಕೊಳ್ಳಲು ಸಲಹೆ.
*ಸ್ಯಾನಿಟೈಸರ್ ಬಳಕೆಗೂ ಸಲಹೆ ನೀಡಲಾಗಿದೆ.
*ಐಎಲ್ಐ, ಸಾರಿ ಲಕ್ಷಣ ಇರುವವರು ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು.