ಮಡಿಕೇರಿ: ಚುನಾವಣೆ ಸಮಯದಲ್ಲಿ ಸಮಾಜದ ಶಾಂತಿ ಕದಡಲು ಕುತಂತ್ರ ನಡೆದಿದೆ ಎಂದು ಶಾಸಕ ಕೆ.ಜಿ ಬೋಪಯ್ಯ (K.G Bopaiah) ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು (Kodagu) ಜಿಲ್ಲೆಯ ವಿಹೆಚ್ಪಿ (Vishva Hindu Parishad) ಅಧ್ಯಕ್ಷ ಹಾಗೂ ವಕೀಲ ಕೃಷ್ಣಮೂರ್ತಿಯವರ ಮೇಲೆ ನಡೆದ ಗುಂಡಿನ ದಾಳಿಯನ್ನು (Firing) ತೀವ್ರವಾಗಿ ಖಂಡಿಸಿದ್ದಾರೆ. ಈ ಹಿಂದೆ ಸುಳ್ಯ ತಾಲೂಕಿನ ಯುವಕ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿಸಿದ್ದ ಅನ್ಯಕೋಮಿನವರು ಕೊಡಗಿನಲ್ಲಿ ತರಬೇತಿ ಪಡೆದಿರುವುದು ತನಿಖೆ ವೇಳೆ ಬಹಿರಂಗಗೊಂಡಿತ್ತು. ಗುಂಡಿನ ದಾಳಿ ಪ್ರಕರಣದಲ್ಲಿಯೂ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೊಡಗು ವಿಹೆಚ್ಪಿ ಅಧ್ಯಕ್ಷನ ಮೇಲೆ ಗುಂಡಿನ ದಾಳಿ
ಕೃಷ್ಣಮೂರ್ತಿ ಬುಧವಾರ ಕುಶಾಲನಗರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಚಟ್ಟಳ್ಳಿಯ (Chettalli) ಗ್ರಾಮ ಪಂಚಾಯಿತಿ ಸದಸ್ಯ ಕಂಠಿ ಕಾರ್ಯಪ್ಪರನ್ನು ರಾತ್ರಿ 11:30ರ ವೇಳೆಗೆ ಅವರ ಮನೆಯ ಬಳಿ ಇಳಿಸಿ ಹೊರಟಿದ್ದರು. ಈ ವೇಳೆ ಅಬ್ಯಾಲದ ಬಳಿ ಗುಂಡಿನ ದಾಳಿ ನಡೆದಿದೆ. ಚಲಿಸುತ್ತಿದ್ದ ಕಾರಿಗೆ ಗುಂಡು ತಗಲಿದ್ದರಿಂದ ಕೃಷ್ಣಮೂರ್ತಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಮಡಿಕೇರಿಗೆ ಬಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.
ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಡಿಕೇರಿ (Madikeri) ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಚುನಾವಣೆ (Election) ಸಂದರ್ಭದಲ್ಲಿ ಕೋವಿಗಳನ್ನು ಸಮೀಪದ ಪೊಲೀಸ್ ಠಾಣೆಗಳಲ್ಲಿ ಒಪ್ಪಿಸುವ ಕ್ರಮವಿದೆ. ಹೀಗಾಗಿ ಪರವಾನಿಗೆ ರಹಿತ ಕೋವಿಯಿಂದ ದಾಳಿ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಚುನಾವಣೆ ಹೊತ್ತಿನಲ್ಲಿ ಹಿಂದೂ ಪರ ಸಂಘಟನೆ ಮುಖಂಡನ ಹತ್ಯೆಗೆ ಯತ್ನ ನಡೆದಿತ್ತಾ ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಬಟಿಂಡಾ ಸೇನಾ ನೆಲೆಯಲ್ಲಿ ಗುಂಡಿನ ದಾಳಿ – ಮೃತಪಟ್ಟವರಲ್ಲಿ ಇಬ್ಬರು ಕರ್ನಾಟಕದವರು