ಮಡಿಕೇರಿ: ಬಿಜೆಪಿ ಮುಖಂಡರೊಬ್ಬರ ಮನೆಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ವಿರಾಜಪೇಟೆ ತಾಲೂಕಿನ ಚೀನಿವಾಡ ಗ್ರಾಮದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಸುಮಾರು 1 ಗಂಟೆಗೆ ಬಿಜೆಪಿ ಕೃಷಿ ಮೋರ್ಚಾ ವಿರಾಜಪೇಟೆ ತಾಲೂಕು ಜಿಂಟಿ ಕಾರ್ಯದರ್ಶಿಯಾಗಿರುವ ದಾದು ಪೂವಯ್ಯ ಅವರ ಮನೆ ಮೇಲೆ ಗುಂಡಿನ ದಾಳಿ ನಡೆದಿದೆ. ಮನೆಯ ಕಿಟಕಿಯಲ್ಲಿ ಗುಂಡಿನ ದಾಳಿಯ ಗುರುತುಗಳು ಪತ್ತೆಯಾಗಿವೆ. ಬೆಡ್ ರೂಮಿನ ಕಿಟಕಿ ಗಾಜು ಹಾಗೂ ಮರದ ಫ್ರೇಮ್ ನಲ್ಲಿ ಗುಂಡಿನ ಗುರುತು ಪತ್ತೆಯಾಗಿದ್ದು, ನಾಡ ಬಂದೂಕು ಬಳಸಿ ಮನೆಯ ಮೇಲೆ ದಾಳಿ ನಡೆಸಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ದಾಳಿ ನಡೆದ ಕೊಠಡಿಯಲ್ಲಿ ಯಾರೂ ಇಲ್ಲದ್ದರಿಂದ ಭಾರೀ ಅನಾಹುತ ತಪ್ಪಿದೆ. ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಮೊದಿ ಮೋದಿ ಎಂದು ಜಯಘೋಷ ಕೂಗಿದ್ದರಿಂದ ಗುಂಡಿನ ದಾಳಿ ನಡೆಸಿರುವ ಸಂಶಯಗಳು ವ್ಯಕ್ತವಾಗಿವೆ. ಈ ಭಾಗದಲ್ಲಿ ನನಗೆ ಯಾವುದೇ ಶತ್ರುಗಳಿಲ್ಲ. ಈ ಬಗ್ಗೆ ಪೋಲಿಸರು ಸೂಕ್ತ ತನಿಖೆ ನಡೆಸಬೇಕು ಎಂದು ದಾದು ಪೂವಯ್ಯ ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಆಗಮನದ ವೇಳೆ ಮೋದಿ, ಮೋದಿ ಎಂದು ಕೂಗಿದ ಕಮಲ ಕಾರ್ಯಕರ್ತರು
ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.