ಮೈಸೂರು: ನಗರದ ಹೊರವಲಯದಲ್ಲಿ ವಿಚಿತ್ರ ಹಾಗು ವಿಲಕ್ಷಣ ಘಟನೆ ನಡೆದಿದೆ. ಭೂಮಿಯಿಂದ ಬೆಂಕಿ ಹೊರಬರುತ್ತಿದ್ದು, ಬೆಂಕಿಯ ಕೆನ್ನಾಲಿಗೆಗೆ 14 ವರ್ಷದ ಬಾಲಕನೊಬ್ಬ ಬಲಿಯಾಗಿದ್ದಾನೆ. ಕುಂಬಾರ ಕೊಪ್ಪಲು ನಿವಾಸಿ ಸೋಮಣ್ಣ ಎಂಬುವರಿಗೆ ಸೇರಿರುವ 4ಎಕರೆ ಜಮೀನಿನಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
ಹರ್ಷಲ್ ಬೆಂಕಿಯ ಕೆನ್ನಾಲಿಗೆಗೆ ಮೃತಪಟ್ಟ ಬಾಲಕ. ಹರ್ಷಲ್ ಬಹಿರ್ದಸೆಗೆ ತೆರಳಿದ್ದಾಗ ತನಗರಿವಿಲ್ಲದೇ ಬೆಂಕಿ ಉಗುಳುತ್ತಿದ್ದ ಭೂಮಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದನು. ಬಳಿಕ ಹರ್ಷಲ್ನನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹರ್ಷಲ್ ಮೃತಪಟ್ಟಿದ್ದಾನೆ. ಹರ್ಷಲ್ ಕ್ಯಾದನಹಳ್ಳಿಯ ಮೂರ್ತಿ ಹಾಗೂ ಜಾನಕಿ ಎಂಬವರ ಪುತ್ರ.
ಘಟನಾ ಸ್ಥಳಕ್ಕೆ ಮೇಟಗಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಭೇಟಿ ನೀಡಿದ ಸಂದರ್ಭದಲ್ಲೂ ಭೂಮಿಯಿಂದ ಬೆಂಕಿ ಹೊರ ಬರುತ್ತಿತ್ತು. ಭೂಮಿಯಿಂದ ಈ ರೀತಿಯಾಗಿ ಬೆಂಕಿ ಬಂದಿರುವುದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಆಸುಪಾಸಿನಲ್ಲಿರುವ ಕಾರ್ಖಾನೆಯಿಂದ ರಾಸಾಯನಿಕ ಪದಾರ್ಥಗಳನ್ನು ತಂದು ಸುರಿದಿರುವ ಕಾರಣ ಈ ರೀತಿ ಭೂಮಿಯಿಂದ ಬೆಂಕಿ ಬಂದಿರಬಹುದೆಂದು ಶಂಕಿಸಲಾಗಿದೆ.