ಎಷ್ಟು ವಿಶ್ವಾಸ ನಿಮ್ಮಲ್ಲಿದೆ? ಬಿಗ್ಬಾಸ್ (Bigg Boss Kannada) ಗ್ರ್ಯಾಂಡ್ ಪ್ರೀಮಿಯರ್ನ ಝಗಮಗಿಸುವ ವೇದಿಕೆಯಲ್ಲಿ ಸುದೀಪ್ ಈ ಪ್ರಶ್ನೆಯನ್ನು ಕೇಳಿದಾಗ ತನಿಷಾ ಕುಪ್ಪಂಡ (Tanisha Kuppanda)ಕ್ಷಣಮಾತ್ರವೂ ಯೋಚಿಸದೆ, ‘very much’ ಎಂದಿದ್ದರು. ಆ ಮಾತಿನಲ್ಲಷ್ಟೇ ಅಲ್ಲ, ಅವರ ನಿಲುವಿನಲ್ಲಿ, ಮುಖದಲ್ಲಿ, ನಗುವಿನಲ್ಲಿಯೂ ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು. ಆ ವಿಶ್ವಾಸವೇ ಅವರನ್ನು ಬಿಗ್ಬಾಸ್ ಮನೆಯೊಳಗೆ ನೂರನೇ ದಿನದ ಗಡಿಯನ್ನೂ ದಾಟುವಂತೆ ಮಾಡಿದೆ. ಅಂತಿಮ ಹಂತಕ್ಕೆ ಒಂದೇ ಒಂದು ಹೆಜ್ಜೆ ಬಾಕಿ ಇರುವಾಗಲ ತನಿಷಾ ಮನೆಯಿಂದ ಅನಿರೀಕ್ಷಿತವಾಗಿ ಹೊರಬಿದ್ದರು.
ತನಿಷಾ ವಿಶ್ವಾಸಕ್ಕೆ ಮೊದಲ ಪೆಟ್ಟು ಬಿದ್ದಿದ್ದೂ ಅದೇ ಗ್ರ್ಯಾಂಡ್ ಪ್ರೀಮಿಯರ್ ವೇದಿಕೆಯಲ್ಲಿಯೇ. ಜನರ ವೋಟ್ಗಳ ಕೊರತೆಯಿಂದ ಅವರನ್ನು ಹೋಲ್ಡ್ನಲ್ಲಿ ಇರಿಸಲಾಯಿತು. ನಂತರ ‘ಅಸಮರ್ಥ’ ಎಂಬ ಪಟ್ಟ ಹೊತ್ತುಕೊಂಡೇ ಮನೆಯೊಳಗೆ ಎಂಟ್ರಿ ಕೊಟ್ಟರು. ಈಗಾಗಲೇ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ ‘ಸಮರ್ಥ’ರು ಮನೆಯೊಳಗಿನ ಎಲ್ಲ ಸೌಕರ್ಯಗಳನ್ನು ಬಳಸಿಕೊಂಡು ಮೆರೆಯುತ್ತಿದ್ದರೆ, ತನಿಷಾ ತನ್ನ ‘ಅಸಮರ್ಥ’ ಜೊತೆಗಾರರೊಂದಿಗೆ ನೆಲದಲ್ಲಿ ಕುಳಿತಿದ್ದರು. ಆದರೆ ಅವರ ಮನಸ್ಸಿನಲ್ಲಿ ವಿಶ್ವಾಸ ಮಾತ್ರ ಕೊಂಚವೂ ಕಡಿಮೆಯಾಗಿರಲಿಲ್ಲ.
ಅಷ್ಟೇ ಅಲ್ಲ, ಮೊದಲ ವಾರ ಎಲಿಮಿನೇಷನ್ನ ಎರಡನೇ ಬಣ್ಣದ ಗುಂಡು ಬಿದ್ದಿದ್ದೂ ತನಿಷಾ ಕುಪ್ಪಂಡ ಮುಖಕ್ಕೆ. ನಾಮಿನೇಟ್ ಮಾಡಿದ ನಮ್ರತಾ ನೀಡಿದ ಕಾರಣಗಳಲ್ಲಿಯೇ ತನಿಷಾ ಅವರ ‘ಧ್ವನಿ’ಯ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಅದು ಆರಂಭವಷ್ಟೇ. ಈ ಸೀಸನ್ ಪಯಣದುದ್ದಕ್ಕೂ ತನಿಷಾ ಧ್ವನಿಯೆತ್ತರಿಸಿ ಮಾತಾಡುತ್ತಾರೆ ಎಂಬುದು ಒಂದು ಆರೋಪದ ಹಾಗೆ ಪದೇ ಪದೇ ಕೇಳಿಬರುತ್ತಲೇ ಇತ್ತು. ಅವರನ್ನು ನಾಮಿನೇಟ್ ಮಾಡುವ ಬಹುತೇಕ ಸದಸ್ಯರು ನೀಡುತ್ತಿದ್ದ ಕಾರಣಗಳಲ್ಲಿ ಅದೂ ಒಂದಾಗಿರುತ್ತಿತ್ತು. ಆದರೆ ಅಂದು ನಾಮಿನೇಷನ್ಗೆ ಒಳಗಾದ ತನಿಷಾ ಅಸಮರ್ಥರು ಸಮರ್ಥರಾಗುವ ಟಾಸ್ಕ್ಗಳಲ್ಲಿ ತೋರಿದ ಪ್ರದರ್ಶನ ಸಮರ್ಥರ ಎದೆಯಲ್ಲಿಯೂ ಅಳುಕು ಹುಟ್ಟಿಸಿದ್ದಂತೂ ನಿಜ.
ಟಾಸ್ಕ್ ವಿಷಯವೇ ಇರಲಿ, ಮನೆಯ ಉಳಿದ ಚಟುವಟಿಕೆಗಳಲ್ಲಿ ಭಾಗವಹಿಸುವ ಸಂದರ್ಭವೇ ಇರಲಿ. ತನಿಷಾ ಎಂದೂ ಹಿಂದೆ ಬಿದ್ದವರಲ್ಲ. ಕೆಲವೊಮ್ಮೆ ತಮ್ಮ ತಂಡ, ತಮ್ಮ ಸ್ನೇಹಿತರನ್ನು ವಹಿಸಿಕೊಂಡು ಜಗಳಕ್ಕೆ ನಿಲ್ಲಲೂ ಹಿಂಜರಿದವರಲ್ಲ. ಫಿಜಿಕಲ್ ಟಾಸ್ಕ್ಗಳಾಗಲಿ, ಬುದ್ಧಿವಂತಿಕೆಯ ಆಟಗಳಾಗಲಿ, ಪ್ರತಿವಾರ ಮನೆಗೆ ಲಕ್ಷುರಿ ಬಜೆಟ್ ಬರೆಯುವ ಚಟುವಟಿಕೆಯೇ ಇರಲಿ ತನಿಷಾ ಮುಂದಿರುತ್ತಿದ್ದರು. ಇದರಾಚೆಗೆ ಅವರೊಳಗಿನ ಕಮಿಡಿಯನ್ ಹೊರಬಂದಿದ್ದು, ‘ಬೃಂದಾವನ’ ಧಾರಾವಾಹಿ ತಂಡ ಮನೆಗೆ ಭೇಟಿ ನೀಡಿದಾಗ. ಭಾಗ್ಯಶ್ರೀ, ತುಕಾಲಿ ಸಂತೋಷ್ ಜೊತೆಗೆ ಸೇರಿ ಅವರು ಪ್ರಸ್ತುತಪಡಿಸಿದ ಸ್ಕಿಟ್ಗಳಲ್ಲಿ ಅವರ ಟೈಮಿಂಗ್, ಹಾಸ್ಯಪ್ರಜ್ಞೆ ಅಷ್ಟೇ ಅಲ್ಲ, ಸಹಸ್ಪರ್ಧಿಗಳ ಜೊತೆಗಿನ ಬಾಂಧವ್ಯವನ್ನೂ ತೋರಿಸುವಂತಿತ್ತು.
ತನ್ನ ತಾಯಿ ಮತ್ತು ತಮ್ಮ ನೆಚ್ಚಿನ ನಾಯಿ ಈ ಇಬ್ಬರನ್ನು ಬಿಟ್ಟರೆ ಇನ್ಯಾರನ್ನಾದರೂ ನಾನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದರೆ ಅದು ಫಿಪ್ಟಿ ಫಿಪ್ಟಿ ಅಷ್ಟೇ ಆಗಿರುತ್ತದೆ ಎಂದು ಹೇಳಿಯೇ ಮನೆಯೊಳಗೆ ಹೋಗಿದ್ದ ತನಿಷಾ, ಬಿಗ್ಬಾಸ್ ಮನೆಯೊಳಗೆ ಹಲವು ಸಂಬಂಧಗಳನ್ನು ಹಾದು ಬಂದಿದ್ದಾರೆ. ಅವುಗಳಲ್ಲಿ ಆರಂಭದ ವಾರದಿಂದ ಸಂಗೀತಾ ಮತ್ತು ಕಾರ್ತಿಕ್ ಜೊತೆಗೆ ಮೂಡಿದ ಸ್ನೇಹ ಸಂಬಂಧ ವಿಶೇಷವಾದದ್ದು. ಈ ಮೂವರ ಸ್ನೇಹ ಮನೆಯೊಳಗೇ ಹಲವರ ಕುಹುಕಕ್ಕೆ, ಜಲಸಿಗೂ ಕಾರಣವಾಗಿದ್ದೂ ನಿಜ.
ಒಬ್ಬರಿಗೊಬ್ಬರು ಬಿಟ್ಟುಕೊಡದೆ, ಒಬ್ಬರನ್ನೊಬ್ಬರು ಬೆಂಬಲಿಸಿಕೊಂಡೇ ಬರುತ್ತಿದ್ದರು. ಆದರೆ ಒಂದು ಹಂತದಲ್ಲಿ ಸಂಗೀತಾ, ತಮ್ಮ ಎದುರಾಳಿಗಳಾದ ವಿನಯ್ ತಂಡವನ್ನು ಸೇರಿಕೊಂಡಾಗಲೇ ಈ ತ್ರಿಕೋನ ಸ್ನೇಹಸಂಬಂಧದಲ್ಲಿ ಮೊದಲ ಬಿರುಕು ಕಾಣಿಸಿಕೊಂಡಿದ್ದು. ಪರಸ್ಪರ ಎದುರಾಳಿಗಳಾಗಿದ್ದಾಗ ತನಿಷಾ ಮತ್ತು ಸಂಗೀತಾ ಅವರ ನಡುವೆ ಹಲವು ಮಾತಿನ ಚಕಮಕಿಗಳು ನಡೆದವು. ಈ ಬಿರುಕು ಮುಂದೆಂದೂ ಸಂಪೂರ್ಣವಾಗಿ ಸರಿಹೋಗಲೇ ಇಲ್ಲ.