ಮೈಸೂರು: ಇಲ್ಲಿನ ಹೊರವಲಯದ ಬೆಲವತ್ತ ಗ್ರಾಮದ ಬಳಿ ಭೂಮಿ ಕೊತಕೊತನೆ ಕುದಿಯುತ್ತಿದ್ದು, ಇದರ ಅರಿವಿಲ್ಲದೆ ಬಹಿರ್ದೆಸೆಗೆ ತೆರಳಿದ್ದ 14 ವರ್ಷದ ಹರ್ಷಲ್ ಬೆಂಕಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಕುಂಬಾರ ಕೊಪ್ಪಲು ನಿವಾಸಿ ಸೋಮಣ್ಣ ಎಂಬುವರಿಗೆ ಸೇರಿರುವ 4 ಎಕರೆ ಜಮೀನಿನಲ್ಲಿ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಮತ್ತೊಬ್ಬ ಬಾಲಕನಿಗೆ ಗಂಭೀರ ಗಾಯವಾಗಿದೆ.
ಪ್ರಕೃತಿಯ ವೈಚಿತ್ರ್ಯದ ಬಗ್ಗೆ ಮೇಟಗಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಮಾಡಿದ್ದಾರೆ. ಹಗಲು ಹೊತ್ತು ಭೂಮಿ ಕುದಿಯುತ್ತಿದ್ದ ದೃಶ್ಯ ಕಂಡು ಬಂದಿದೆ. ಜಮೀನಿನ ಪಕ್ಕದಲ್ಲೇ ನೋಟು ಪ್ರಿಂಟ್ ಮಾಡುವ ಆರ್ಬಿಐ ಸಂಸ್ಥೆ ಹಾಗೂ ಸಾವಿರಾರು ಕಾರ್ಖಾನೆಗಳು ಹಾಗು ಇತರೆ ಕಂಪನಿಗಳು ಇವೆ. ಅಲ್ಲೇ ಇರೋ ಟೈರ್ ಕಂಪನಿಯಿಂದ ರಾಸಾಯನಿಕ ವಸ್ತು ಹೊರ ಬಿಡುತ್ತಿರುವ ಶಂಕೆ ಇದೆ. ಅಲ್ಲದೇ ಕಾರ್ಖಾನೆಗಳು ತಮ್ಮ ತ್ಯಾಜ್ಯಗಳನ್ನ ಈ ಜಾಗದಲ್ಲಿ ತಂದು ಸುರೀತಿದ್ದಾರೆ. ಸ್ಥಳದಲ್ಲಿ ಒಂದಷ್ಟು ಕೆಮಿಕಲ್ಗಳು ಕಂಡುಬರ್ತಿವೆ. ಒಟ್ಟಿನಲ್ಲಿ ಮಣ್ಣಿನ ಪರೀಕ್ಷೆ ನಂತರವೇ ಸೂಕ್ತ ಕಾರಣ ಪತ್ತೆಯಾಗಬೇಕಿದೆ ಅಂತಾ ವಿಜ್ಞಾನಿಗಳು ತಿಳಿಸಿದ್ದಾರೆ.
ಭೂಮಿ ಕುದಿಯುತ್ತಿರೋ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಒಂದು ದಿನದ ನಂತ್ರ ಎಚ್ಚೆತ್ತ ಭೂವಿಜ್ಞಾನಿಗಳು ಬೆಳ್ಳಂಬೆಳಗ್ಗೆ ಘಟನಾ ಸ್ಥಳಕ್ಕೆ ಬಂದಿದ್ದಾರೆ. ಬೆಂಕಿ ಹಾಗೂ ಭೂಮಿಯನ್ನು ಪರಿಶೀಲಿಸುತ್ತಿದ್ದಾರೆ. ಆದ್ರೆ, ಇದುವರೆಗೂ ಡಿಸಿ, ತಹಶೀಲ್ದಾರ್, ಎಂಎಲ್ಎ, ಎಂಪಿ ಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಅಂತಾ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಭಾರೀ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.
ಇಂದು ಅಂತ್ಯಕ್ರಿಯೆ: ಭೂಮಿಯ ಬೆಂಕಿಗೆ ಬಲಿಯಾದ ಹರ್ಷಿಲ್ ಅಂತ್ಯಕ್ರಿಯೆ ನಡೆಯಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.