ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಲಾಲಗೌಡ ನಗರದ ಸಮೀಪದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುತ್ತಮುತ್ತಲ ಪ್ರದೇಶಕ್ಕೆ ಆವರಿಸಿ ಇಲ್ಲಿನ ಜನ ಭಯ ಪಡುವಂತಾಯಿತು.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿರಸಿಯ ಲಾಲಗೌಡ ನಗರದ ಈ ತ್ಯಾಜ್ಯ ವಿಲೇವಾರಿ ಘಟಕ ಈ ಹಿಂದೆಯೇ ಮುಚ್ಚಲಾಗಿತ್ತು. ಘಟಕದಲ್ಲಿ ಪ್ಲಾಸ್ಟಿಕ್ ಹೊದಿಕೆ ಅಳವಡಿಸಿ ಹಾಗೆಯೇ ಬಿಡಲಾಗಿತ್ತು.
ಉಪಯೋಗವಾಗುತ್ತಿರದ ಕಾರಣ ಈ ಘಟಕದ ತುಂಬ ಗಿಡಗಂಟೆಗಳು ಬೆಳೆದು ನಿಂತಿದ್ದವು. ಬಿಸಿಲ ತಾಪಕ್ಕೆ ಗಿಡಗಂಟೆಗಳು ಒಣಗಿದ್ದು, ಪ್ಲಾಸ್ಟಿಕ್ ಹೊದಕೆಗಳು ಕಾದು ಹೋಗಿತ್ತು. ಹೀಗಾಗಿ ಎಲ್ಲೋ ಬಿದ್ದ ಬೆಂಕಿ ಕಿಡಿ ಇಡೀ ಘಟಕಕ್ಕೆ ಆವರಿಸಿ ಇಲ್ಲಿನ ವಸ್ತುಗಳು ಬೆಂಕಿಗಾಹುತಿಯಾಗಿವೆ. ಸಾವಿರಾರು ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.