ಬಳ್ಳಾರಿ: ದೇವರ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಪೇದೆ ವಿರುದ್ಧ ಹೊಸಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಜಿಲಾ ಶಸ್ತ್ರಸಜ್ಜಿತ (ಡಿಎಆರ್) ಪೊಲೀಸ್ ಪೇದೆಯಾಗಿರುವ ಕೃಷ್ಣ ಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪದಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
2017 ರಲ್ಲಿ ಜಿಲ್ಲೆಯ ಕೊಟ್ಟೂರಿನ ಕೊಟ್ಟೂರೇಶ್ವರ ಜಾತ್ರೆಯ ವೇಳೆ ಹಳೆಯ ರಥ ಮುಗುಚಿಬಿದ್ದಿತ್ತು. ಈ ವೇಳೆ ಕೊಟ್ಟೂರೇಶ್ವರ ದೇವರು ವಿರುದ್ಧ ಎಲ್ಲಿದ್ದಾನೆ? ಬರಗಾಲದಲ್ಲೂ ಏಕೆ ರಥ ಎಳೆದಿರಿ? ಒಳ್ಳೆದಾಗಲಿ ಎಂದು ತಾನೇ, ರಥ ಏಕೆ ಮುರಿದು ಬಿತ್ತು? ಕಲ್ಲು ಹೊಡೀರಿ ನಿಮ್ಮ ದೇವರ ಗುಡಿಗೆ. ದೇವರು ಗುಡಿ ಬಿಟ್ಟು ಹೊರಗೆ ಬರಲಿ. ಯಾಕೆ ಜನರನ್ನು ನೋಯಿಸುವ ದೇವರು. ಉಗೀರಿ ನಿಮ್ಮ ದೇವರ ಮುಖಕ್ಕೆ. ಗಾಯಗೊಂಡ ಜನರ ಚಿಕಿತ್ಸೆ ದೇವರು ಹಣ ಕೋಡುತ್ತಾನೆಯೇ, ಉತ್ತರ ನೀಡಿ ನಾಸ್ತಿಕರೇ ಎಂದು ಪ್ರಶ್ನಿಸಿ ಪೇದೆ ಕೃಷ್ಣಕುಮಾರ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು.
ಈ ಪೋಸ್ಟ್ ಗೆ ಕೆರಳಿದ್ದ ಕೊಟ್ಟೂರೇಶ್ವರ ನ ಭಕ್ತರು ಪ್ರತಿಭಟನೆ ನಡೆಸಿ ಕೃಷ್ಣಕುಮಾರ್ ವಿರುದ್ಧ ದೂರು ನೀಡಿದ್ದರು. ಆದರೆ ಇದುವರೆಗೂ ಪೇದೆಯ ವಿರುದ್ಧ ಎಫ್ಐಆರ್ ದಾಖಲಾಗಿರಲಿಲ್ಲ. ಇದೀಗ ಹೊಸಪೇಟೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾದ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿ ಪ್ರಕರಣದ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ.
ಅಂದು ಏನಾಗಿತ್ತು?
2017ರ ಫೆಬ್ರವರಿ 21 ರಂದು ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೊಟ್ಟೂರು ಗುರು ಬಸವೇಶ್ವರ ರಥೋತ್ಸವ ವೇಳೆಯಲ್ಲಿ ಚಕ್ರದ ಅಚ್ಚು ಮರಿದು ರಥ ಮುಗುಚಿ ಬಿದ್ದಿತ್ತು. ರಥ ಎಳೆಯುವ ವೇಳೆ ಚಕ್ರದ ಅಚ್ಚು ಮುರಿದು 60 ಅಡಿ ಎತ್ತರದ ರಥ ನೆರೆದಿದ್ದ ಅಪಾರ ಭಕ್ತ ಸಾಗರದ ಮಧ್ಯೆ ಬಿದ್ದಿತ್ತು. ಬಳಿಕ ಮುಂದಿನ ವರ್ಷದ ಜಾತ್ರೆಯ ವೇಳೆಗೆ ಸರ್ಕಾರ ನೂತನ ರಥ ನಿರ್ಮಾಣಕ್ಕಾಗಿ 2 ಕೋಟಿ ರೂಪಾಯಿ ಅನುದಾನ ನೀಡಿತ್ತು. 2018 ಫೆಬ್ರುವರಿ 14 ರಂದು ರಥೋತ್ಸದಕ್ಕೆ ನೂತನ ರಥ ಸಿದ್ಧಪಡಿಸಲಾಗಿತ್ತು. ಪ್ರತಿ ವರ್ಷ ನಡೆಯುವ ಗುರು ಬಸವೇಶ್ವರ ರಥೋತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ.