ಬೆಂಗಳೂರು: ಕನ್ನಡ ನಾಮಫಲಕ (Kannada Board) ಹಾಕದ ಅಂಗಡಿ ಮುಂಗಟ್ಟುಗಳ ಮುಂದೆ ಇಂಗ್ಲಿಷ್ ಬೋರ್ಡ್ (English Board) ಹರಿದು, ಕಲ್ಲು ತೂರಾಟ ನಡೆಸಿದ್ದ ಕರವೇ, ಆಕ್ರೋಶ ಹೊರಹಾಕಿತ್ತು. ಇದೀಗ ಕಾನೂನು ಉಲ್ಲಂಘನೆ ಆರೋಪದ ಮೇಲೆ ಕರವೇ ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಾಗಿದೆ.
ಕನ್ನಡ ಬಳಸಿ ಇಲ್ಲವೇ ಕರ್ನಾಟಕ ಬಿಟ್ಟು ತೊಲಗಿ, ಅಂಗಡಿ ಮುಂಗಟ್ಟುಗಳ ಬೋರ್ಡ್ ಕನ್ನಡದಲ್ಲಿರಬೇಕು. ಕನ್ನಡ ಭಾಷೆ (Kannada Language) ಬಳಕೆಗಾಗಿ ಒತ್ತಾಯಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಸ್ತೆಗೆ ಇಳಿದಿದ್ರು. ಬೆಂಗಳೂರಿನಲ್ಲಿ ಇರುವ ಇಂಗ್ಲಿಷ್ ನಾಮಫಲಕ ಹರಿದು ಆಕ್ರೋಶ ಹೊರಹಾಕಿದ್ರು. ಈ ಮಧ್ಯೆ ಉದ್ರಿಕ್ತಗೊಂಡ ಕಾರ್ಯಕರ್ತರು ಇಂಗ್ಲೀಷ್ ಬೋರ್ಡ್ಗಳ ಮೇಲೆ ಹಲವೆಡೆ ಕಲ್ಲು ತೂರಾಟ ಕೂಡ ಮಾಡಿದ್ರು. ಕರವೇ ಪ್ರತಿಭಟನೆ ಹತ್ತಿಕ್ಕಲು ಮಧ್ಯಾಹ್ನದಿಂದ ವಶಕ್ಕೆ ಪಡೆದ ಕಾರ್ಯಕರ್ತರನ್ನ ಸಂಜೆ ಆಗ್ತಿದ್ದಂತೆ ಬಿಡುಗಡೆ ಮಾಡಲಾಯ್ತು. ಅವರ ಜೊತೆಗೆ 250 ಕಾರ್ಯಕರ್ತರನ್ನ ಸಹ ಪೊಲೀಸ್ ವಾಹನ ತರಬೇತಿ ಶಾಲೆಯಲ್ಲೇ ಇರಿಸಲಾಗಿತ್ತು. ಹೀಗಾಗಿ ತಡ ಆಗಿದ್ರಿಂದ ದೂರದೂರುಗಳಿಗೆ ತೆರಳುವ ಕಾರ್ಯಕರ್ತರಿಗೆ ಕಷ್ಟ ಆಗತ್ತೆ ಅಂತಾ ಪೊಲೀಸ್ ವಾಹನ ಚಾಲನಾ ಕೇಂದ್ರದಲ್ಲಿಯೇ ರಾತ್ರಿ ಉಳಿದುಕೊಳ್ಳುವ ನಿರ್ಧಾರ ಮಾಡಿದರು.
ಲ್ಯಾವೆಲ್ಲೆ ರಸ್ತೆಯಲ್ಲಿ ಇಂಗ್ಲಿಷ್ ನಾಮಫಲಕ ಹರಿದಿದ್ದಕ್ಕಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ 15 ಜನ ಕರವೇ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಲಾಗಿತ್ತು. ಇನ್ನುಳಿದಂತೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಂಪೈರ್ ಹೋಟೆಲ್ಗೆ ಕಲ್ಲು ತೂರಾಟ ನಡೆಸಿದಕ್ಕೆ ಎಫ್ಐಆರ್ ದಾಖಲಾದ್ರೆ, ಅಶೋಕನಗರದಲ್ಲಿ ಲ್ಯಾವೆಲೆ ರಸ್ತೆ ಇಂಗ್ಲಿಷ್ ಬೋರ್ಡ್ ಧ್ವಂಸ ಮಾಡಿದಕ್ಕಾಗಿ ದೂರು ದಾಖಲಾಗಿದೆ. ಕಾಟನ್ ಪೇಟೆಯಲ್ಲಿ ಒಂದು ಎಫ್ಐಆರ್ ಆದ್ರೆ, ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಬಿಎಂಟಿಸಿ ಬಸ್ ಗಾಜು ಒಡೆದಿದ್ದಕ್ಕೆ ಸೇರಿದಂತೆ, ಪೊಲೀಸರ ಮೇಲೆಯೇ ಪ್ರತಿಭಟನಾಕಾರರು ಉಗುಳಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಮತ್ತು ರಸ್ತೆತಡೆ ನಡೆಸಿ ಗಲಾಟೆ ಮಾಡಿ ಅಡಚಣೆ ಮಾಡಿದ್ದಕ್ಕೆ ಮೂರು ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ.
ಇನ್ಸ್ ಪೆಕ್ಟರ್ ಗಿರೀಶ್ ವಿರುದ್ಧ ಕರವೇ ಕಿಡಿ: ಪ್ರತಿಭಟನಾ ನಿರತ ಕರವೇ ಕಾರ್ಯಕರ್ತರ ಮೇಲೆ ಕಬ್ಬನ್ ಪಾರ್ಕ್ ಠಾಣೆ ಇನ್ಸ್ ಪೆಕ್ಟರ್ ಗಿರೀಶ್ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಲಾಠಿ ಚಾರ್ಜ್ನಲ್ಲಿ ಓರ್ವನ ಕೈ ಮೂಳೆ ಮುರಿದಿದ್ರೆ, ಮತ್ತೋರ್ವನ ಕಾಲಿಗೆ ಇನ್ಸ್ ಪೆಕ್ಟರ್ ಹೊಡೆದು ಗಾಯ ಮಾಡಿದ್ದಾರಂತೆ. ಅಲ್ಲದೇ 15 ಜನ ಅಮಾಯಕರ ವಿರುದ್ಧ ಎಫ್ಐಆರ್ ಮಾಡಿ ಬಂಧಿಸಿದ್ದಾರೆಂದು ಆರೋಪಿಸಿ ಠಾಣೆ ಎದುರು ಅರೆಬೆತ್ತಲೆಯಾಗಿಯೇ ಪ್ರತಿಭಟಿಸಿದ್ರು.