ಹಾಸನ: ಜಿಲ್ಲೆಯ ಹೊಳೆನರಸೀಪುರ ಪಡವಲಹಿಪ್ಪೆ ಗ್ರಾಮದಲ್ಲಿ ಅಕ್ರಮ ಮತದಾನ ನಡೆಸಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಈಗ ಹಿನ್ನಡೆಯಾಗಿದೆ.
ಅಕ್ರಮ ಮತದಾನ ಕುರಿತು ಆಯೋಗಕ್ಕೆ ದೂರು ನೀಡಿದ್ದ ಮಾಯಣ್ಣ ಎಂಬವರ ಮೇಲೆ ಕೂಡ ಈಗ ಆಯೋಗ ಎಫ್ಐಆರ್ ಮಾಡಿದೆ. ಏ.18 ರಂದು ಪಡವಲಹಿಪ್ಪೆಯ ಮತಗಟ್ಟೆ ನಂಬರ್ 277ರಲ್ಲಿ ಮಾಜಿ ಪ್ರದಾನಿ ದೇವೇಗೌಡರು, ಸಚಿವ ಹೆಚ್.ಡಿ.ರೇವಣ್ಣ, ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸೇರಿದಂತೆ ಕುಟುಂಬ ಸದಸ್ಯರೆಲ್ಲ ಮತದಾನ ಮಾಡಿದ್ದರು. ಇವರ ಮತದಾನ ಮಾಡಿದ ನಂತರ ಭೂತ್ನಲ್ಲಿ ಅಕ್ರಮವಾಗಿ ಮತದಾನ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿಯ ತಾಲೂಕು ಕಾರ್ಯಕರ್ತರಾದ ಮಾಯಣ್ಣ ಮತ್ತು ರಾಜು ಎಂಬುವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ದೂರು ಸ್ವೀಕರಿಸಿದ ಬಳಿಕ ಅಲ್ಲಿಯ ಸಿಸಿಟಿವಿಯ ದೃಶ್ಯಾವಳಿಗಳನ್ನು ಸಹ ಆಯೋಗ ಪರಿಶೀಲನೆ ಮಾಡಿತ್ತು. ಈ ಸಂದರ್ಭದಲ್ಲಿ ಮೂವರು ಮತಗಟ್ಟೆ ಅಧಿಕಾರಿಗಳನ್ನು ಸಹ ಜಿಲ್ಲಾ ಮುಖ್ಯ ಚುನಾವಣಾ ಅಧಿಕಾರಿ ಅಮಾನತು ಮಾಡಿ ಆದೇಶಿಸಿದ್ದರು. ಇದೀಗ ಆಯೋಗಕ್ಕೆ ತಪ್ಪು ಮಾಹಿತಿ ಹಾಗೂ ಸಾರ್ವಜನಿಕೆ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ ಆರೋಪದಡಿಯಲ್ಲಿ ಬಿಜೆಪಿ ಕಾರ್ಯಕರ್ತ ಮಾಯಣ್ಣ ವಿರುದ್ಧವು ಆಯೋಗ ಎಫ್ಐಆರ್ ದಾಖಲಿಸಿದೆ.
ಇತ್ತ ತಮ್ಮ ವಿರುದ್ಧ ದೂರು ನೀಡಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಚಿವ ರೇವಣ್ಣ ಅವರು, ದೂರು ಕೊಟ್ಟವರ ಮೇಲೆ ಎರಡು ಪ್ರಕರಣ ದಾಖಲಾಗಿದೆ. ಯಾವುದೇ ಕಳ್ಳ ಮತದಾನವನ್ನು ನಾನು ಹಾಕಿಸಿಲ್ಲ. ಅವತ್ತು ನಾನು ಮಾಧ್ಯಮಗಳ ಜೊತೆಯೇ ಇದ್ದೆ, ನಮ್ಮ ಕಾರ್ಯಕರ್ತ ಸೂರಜ್ ಮಗನ ಕೈಯಲ್ಲಿ ವೋಟ್ ಹಾಕಿಸಿದ್ದಾರೆ ಅಂತ ಹೇಳಿದ್ದಾರೆ. ಆದರೆ ಸೂರಜ್ಗೆ ಮಗನೇ ಇಲ್ಲ. ಈ ಸಂಬಂಧ ಆಯೋಗದಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಚುನಾವಣೆ ನಡೆದ ದಿನವೇ ದೂರು ನೀಡುವ ಅವಕಾಶ ಇತ್ತು, ಅಂದು ದೂರು ಏಕೆ ನೀಡಲಿಲ್ಲ. ನಾನು ಕಳ್ಳ ಮತದಾನ ಮಾಡಿಸಿರುವ ವಿಡಿಯೋ ಇದ್ದರೆ ಕೊಡಲಿ. ಇದಕ್ಕೆ ಯಾವುದೇ ತನಿಖೆ ನಡೆಸಿದರು ಸಿದ್ಧ ಎಂದು ಸ್ಪಷ್ಟಪಡಿಸಿದರು.