ಬೆಂಗಳೂರು: ನಗರದ ಬಾರ್ ಅಂಡ್ ರೆಸ್ಟೋರೆಂಟ್ವೊಂದರಲ್ಲಿ ಇಂದು ಬೆಳಗ್ಗಿನ ಜಾವ ಅಗ್ನಿ ದುರಂತ ಸಂಭವಿಸಿದ್ದು, ಕೈಲಾಶ್ ಬಾರ್ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಇಂಥ ಘಟನೆ ನಡೆಯಬಾರದು. ಇದರ ಬಗ್ಗೆ ತನಿಖೆ ಪ್ರಾರಂಭವಾಗಿದೆ. ಬಾಗಿಲ ಹತ್ತಿರ ಯುಪಿಎಸ್ ಇದೆ. ಅದರಿಂದಲೇ ಬೆಂಕಿ ಬಂದಿರೋ ಸಾಧ್ಯತೆಯಿದೆ. ತನಿಖೆ ನಡೆದ ನಂತರ ಏನು ಎಂಬುದು ಗೊತ್ತಾಗುತ್ತೆ ಅಂತ ಹೇಳಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಗೃಹಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾರ್ನಲ್ಲಿ ಕೆಲಸ ಮಾಡುವಾಗ ಸುರಕ್ಷಾ ಕ್ರಮ ಅಳವಡಿಕೆ ಕಡ್ಡಾಯ. ಅಬಕಾರಿ ಇಲಾಖೆ, ಪಾಲಿಕೆ ಇದನ್ನೆಲ್ಲಾ ಗಮನಿಸುತ್ತದೆ ಎಂದರು. ಘಟನೆಗೆ ಸಂಬಂಧಿಸಿದಂತೆ ಬಾರ್ ಮಾಲೀಕ ಆರ್.ವಿ.ದಯಾಶಂಕರ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, 15 ದಿನಗಳೊಳಗಾಗಿ ಉತ್ತರ ನೀಡುವಂತೆ ನೋಟೀಸ್ ನೀಡಲಾಗಿದೆ.
ಎಫ್ಎಸ್ಎಲ್, ವಿದ್ಯುತ್ ಪರಿವೀಕ್ಷಣಾ ತಂಡ ಮತ್ತು ಅಗ್ನಿಶಾಮಕ ಅಧಿಕಾರಿಗಳಿಂದ ಕೈಲಾಶ್ ಬಾರ್ ಪರಿಶೀಲನೆ ನಡೆಯುತ್ತಿದ್ದು, ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂದು ಹುಡುಕಾಟ ನಡೆಸಲಾಗಿದೆ. ಇನ್ನು ಸುಟ್ಟು ಕರಕಲಾದ ಐವರ ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ಮೃತ ಯುವಕರ ಆಕ್ರಂದನ ಮುಗಿಲುಮುಟ್ಟಿದೆ.
ಏನಿದು ಘಟನೆ?: ಮುಂಬೈ ರೀತಿಯಲ್ಲೇ ನಗರದ ಕೈಲಾಶ್ ಬಾರ್ ನಲ್ಲಿ ಇಂದು ಬೆಳಗಿನ ಜಾವ ಸುಮಾರು 2.30ಕ್ಕೆ ನಡೆದ ದುರಂತದಲ್ಲಿ ಕೆಲಸದ ಬಳಿಕ ನಿದ್ರೆ ಜಾರಿದ್ದ ಐವರು ಕಾರ್ಮಿಕರು ಸಜೀವ ದಹನವಾಗಿದ್ದರು. ಮೃತರನ್ನು ತುಮಕೂರು ಮೂಲದ ಸ್ವಾಮಿ(23), ಪ್ರಸಾದ್(20), ಮಹೇಶ್ (35), ಹಾಸನದ ಮಂಜುನಾಥ್ ( 45), ಮಂಡ್ಯದ ಕೀರ್ತಿ(24) ಎಂದು ಗುರುತಿಸಲಾಗಿದೆ.
ಕೆಲಸದ ಬಳಿಕ ಅಲ್ಲಿಯ ನೌಕರರು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದು, ಸಜೀವ ದಹನಗೊಂಡಿದ್ದಾರೆ. ಬಾರ್ ಕಟ್ಟಡ ಸುಮಾರು 20 ರಿಂದ 30 ವರ್ಷಗಳ ಹಳೆಯದು ಎಂದು ತಿಳಿದು ಬಂದಿದೆ. ಹಾಗಾಗಿ ಕಟ್ಟಡದಲ್ಲಿ ಯಾವುದೇ ತುರ್ತು ನಿರ್ಗಮನ ದ್ವಾರ ಇಲ್ಲದ ಕಾರಣ ಐವರು ಸಜೀವ ದಹನವಾಗಿದ್ದಾರೆ. ಮೊದಲಿಗೆ ಕಟ್ಟಡದ ಸಾಕಷ್ಟು ವೈರ್ಗಳಿರುವ ಜಂಕ್ಷನ್ ಬಾಕ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ರಮೇಣ ಕಟ್ಟಡಕ್ಕೆ ಬೆಂಕಿ ಆವರಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
https://www.youtube.com/watch?v=q1xbVb4mm4I