ಚಿಕ್ಕಮಗಳೂರು: ನಟ ಪ್ರಕಾಶ್ ರೈ ಮತ್ತು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇವರು ಅನುಮತಿಯನ್ನು ಪಡೆಯದೆ ಕಾರ್ಯಕ್ರಮ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಸಂವಿಧಾನ ಉಳಿವಿಗಾಗಿ ಕರ್ನಾಟಕ ಹಾಗೂ ಹೋರಾಟ ಗೀತೆ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಅನುಮತಿ ಕೇಳಿದ್ದರು. ಆದರೆ ಜಿಲ್ಲಾಡಳಿತ ಕುವೆಂಪು ಕಲಾಮಂದಿರದಲ್ಲಿ ನಡೆಯಬೇಕಿದ ಕಾರ್ಯಕ್ರಮಕ್ಕೆ ಅನುಮತಿಯನ್ನು ನಿರಾಕರಣೆ ಮಾಡಿದೆ.
ಜಿಲ್ಲಾಡಳಿತ ಅನುಮತಿ ಪಡೆಯದೆ ಚಿಕ್ಕಮಗಳೂರು ನಗರದ ಅಂಡೇ ಛತ್ರದ ಬಳಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಅನುಮತಿ ನಿರಾಕರಣೆ ನಡುವೆಯೂ ಕಾರ್ಯಕ್ರಮ ನಡೆಸಿದ ಆರೋಪದಡಿ ನಟ ಪ್ರಕಾಶ್ ರೈ ಹಾಗೂ ಜಿಗ್ನೇಶ್ ಮೇವಾನಿ ಸೇರಿದಂತೆ 15 ಕ್ಕೂ ಅಧಿಕ ಮಂದಿಯ ಮೇಲೆ ದೂರು ದಾಖಲು ಮಾಡಲಾಗಿದ್ದು, ಐಪಿಸಿ 143, 147, 341, 188, 149 (37,109) ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.