ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ಆಯುಧ ಪೂಜೆ, ದಸರಾ ಸಂಭ್ರಮವಾದರೆ ವ್ಯಾಪಾರಿಗಳಿಗೆ ವ್ಯಾಪಾರದ ಜೊತೆ ತಮ್ಮ ಉಳಿಕೆ ಕಸದ ತಲೆ ನೋವು ಶುರುವಾಗಿದೆ.
ಯಾವುದೇ ಕಾರಣಕ್ಕೂ ಬೀದಿಬದಿ ಕಸ ಎಸೆದು ಹೋಗಬಾರದು. ಕಸ ವಿಂಗಡಿಸಿ ಪೌರಕಾರ್ಮಿಕರಿಗೇ ನೀಡಬೇಕು, ಇಲ್ಲವಾದರೆ ಭಾರೀ ದಂಡ ತೆರಬೇಕಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ನಗರಕ್ಕೆ, ಬೆಂಗಳೂರು ಹೊರವಲಯದ ಹಳ್ಳಿಗಳಿಂದ ವ್ಯಾಪಾರಿಗಳು, ರೈತರು ಬಾಳೆ ಕಂಬ, ಬೂದುಕುಂಬಳಕಾಯಿ, ಹೂವು ತಂದಿದ್ದು ಎರಡು ಮೂರು ದಿನದಿಂದ ಮಾರುಕಟ್ಟೆಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಪೌರಕಾರ್ಮಿಕರು ಕೂಡ ಹಬ್ಬದ ರಜೆಯಲ್ಲಿದ್ದು, ಕಸ ವಿಲೇವಾರಿ ಶೀಘ್ರದಲ್ಲಿ ಆಗೋದು ಅನುಮಾನ.
ಆಯುಕ್ತರು ಮಾತ್ರ, ಕಸವನ್ನು ಕಡ್ಡಾಯವಾಗಿ ವಿಂಗಡಿಸಿ, ತಳ್ಳುವ ಗಾಡಿ ಅಥವಾ ಬಿಬಿಎಂಪಿ ಆಟೋಗಳಿಗೆ ನೀಡಬೇಕು ಎಂದು ಆದೇಶಿಸಿದ್ದಾರೆ. ಕಸ ವಿಂಗಡಿಸದೇ ಅಂಗಡಿಗಳ, ಕಚೇರಿಗಳ ಮುಂಭಾಗದಲ್ಲಿ ಹಾಗೇ ಬಿಟ್ಟಿದ್ದರೆ ಅದೇ ಮಳಿಗೆ, ಅಂಗಡಿಗಳಿಗೆ ಹಾಗೂ ಕಚೇರಿಗಳಿಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೆಆರ್ ಮಾರುಕಟ್ಟೆ, ಚಾಮರಾಜಪೇಟೆ, ಮಲ್ಲೇಶ್ವರಂ ಹಾಗೂ ಶೇಷಾದ್ರಿಪುರಂ ಬಳಿ ಇಂದೇ ರಾಶಿರಾಶಿ ಕಸ ರಸ್ತೆ ಮಧ್ಯಭಾಗದಲ್ಲಿ ಹಾಕಲಾಗಿದೆ. ವಾಹನಗಳು ಹಾಗೂ ಜನ ಕಸದ ಮಧ್ಯೆಯೇ ಓಡಾಡುತ್ತಿದ್ದಾರೆ. ಹಬ್ಬವಾದ ಕಾರಣ ಹೆಚ್ಚಿನ ಪೌರಕಾರ್ಮಿಕರೂ ರಜೆ ಹಾಕಿರುವ ಹಿನ್ನೆಲೆಯಲ್ಲಿ ಕಸದ ರಾಶಿಯೇ ಬಿದ್ದಿದೆ.