ಮಂಗಳೂರು: ಫೈನಾನ್ಸ್ ಕಲೆಕ್ಷನ್ ಮಾಡುವ ಯುವಕನನ್ನು ಅಡ್ಡಗಟ್ಟಿದ್ದ ಮೂವರ ದರೋಡೆಗಾರರ ಗುಂಪು 2.5 ಲಕ್ಷ ರೂ. ದರೋಡೆ ಮಾಡಿದ್ದ ಘಟನೆ ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಬ್ದುಲ್ ಅಜೀಜ್ (19), ಮಹಮ್ಮದ್ ಮುಸ್ತಫ (23), ಆಶ್ಲೇಷ್ ಕೋಟ್ಯಾನ್ (20) ಬಂಧಿತ ಆರೋಪಿಗಳಾಗಿದ್ದು, ಜುಲೈ 14 ರಂದು ಬಿ.ಸಿ.ರೋಡಿನಿಂದ ಪೊಳಲಿಗೆ ತೆರಳುತ್ತಿದ್ದಾಗ ದರೋಡೆ ನಡೆದಿತ್ತು. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಕುರಿತು ತನಿಖೆ ಆರಂಭಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಸೆಂಥಿಲ್ ಕುಮಾರ್ ದರೋಡೆಗೆ ಒಳಗಾದ ಯುವಕನಾಗಿದ್ದು, ತಾಲೂಕಿನ ಪೊಳಲಿ ಬಳಿಯ ಮಳಲಿಯಲ್ಲಿ ಅಂದು ಯುವಕನಿಗೆ ಚೂರಿ ತೋರಿಸಿದ್ದ ಆರೋಪಿಗಳು ಸುಮಾರು 2.5 ಲಕ್ಷ ರೂ. ನಗದು ದೋಚಿದ್ದರು. ಆರೋಪಿಗಳ ಕುರಿತು ಖಚಿತ ಮಾಹಿತಿ ಲಭಿಸಿದ ಪರಿಣಾಮ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಈ ವೇಳೆ ಬಂಧಿತರಿಂದ 21,800 ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಚೂರಿ, ಬೈಕ್, ಮೂರು ಮೊಬೈಲ್ ವಶಕ್ಕೆ ಪಡೆದಿದ್ದಾರೆ.