ಬೆಂಗಳೂರು: ರೋವರ್ (Rover) ಲ್ಯಾಂಡರ್ ನಿಂದ ಹೊರಬಂದು ಚಂದ್ರನ ಮೇಲ್ಮೈ ಮೇಲೆ ಚಲಿಸುವುದನ್ನು ನೋಡಿದ ಬಳಿಕವೇ ನಾನು ತಡರಾತ್ರಿ ನನ್ನ ಮನೆಗೆ ತೆರಳಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಕೆ. ಶಿವನ್ (K Sivan) ಹೇಳಿದ್ದಾರೆ.
ಚಂದ್ರಯಾನ-3 (Chandrayaan-3) ಯಶಸ್ಸಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊನೆಗೂ ನಮ್ಮ ಪ್ರಾರ್ಥನೆ ಫಲಿಸಿತು. ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ (Vikram Lander) ಇಳಿದ ನಂತರ ನಾವು ಅಲ್ಲಿಂದ ಕದಲಿಲ್ಲ. ಬದಲಾಗಿ ರೋವರ್ ಲ್ಯಾಂಡರ್ ನಿಂದ ಹೊರಬರುವವರೆಗೂ ನಾನು ನಿಯಂತ್ರಣ ಕೊಠಡಿಯಲ್ಲಿಯೇ ಕುಳಿತಿದ್ದೆ. ಅಲ್ಲದೆ ಚಂದ್ರನ ಮೇಲ್ಮೈ ಮೇಲೆ ರೋವರ್ ಚಲಿಸೋದನ್ನು ನೋಡಿದ ಬಳಿಕವೇ ಮನೆಗೆ ಹೋದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಚಂದ್ರಯಾನ-2 (Chandrayaan-2) ರಲ್ಲಿ ಸಂಭವಿಸಿದ ಸಣ್ಣ ದೋಷದಿಂದಾಗಿ ನಾವು ಸಕ್ಸಸ್ ಕಾಣಲು ಸಾಧ್ಯವಾಗಲಿಲ್ಲ. ಇಲ್ಲದಿದ್ದರೆ ನಾಲ್ಕು ವರ್ಷಗಳ ಹಿಂದೆಯೇ ನಾವು ಚಂದ್ರನ ಮೇಲೆ ಕಾಲಿಡುತ್ತಿದ್ದೆವು. ತಪ್ಪಿನಿಂದ ಪಾಠ ಕಲಿತು ತಿದ್ದಿದ್ದು, ಖುಷಿಯಾಗಿದೆ. 2019ರಲ್ಲಿಯೇ ಚಂದ್ರಯಾನ-3 ಅನ್ನು ಕಾನ್ಫಿಗರ್ ಮಾಡಿದ್ದು, ಮುಂದೆ ಯಾವ ತಪ್ಪನ್ನು ಮಾಡಬಾರದು ಎಂಬುದನ್ನು ಕೂಡ ಅಂದೇ ನಿರ್ಧಾರ ಮಾಡಲಾಗಿತ್ತು. ಆ ಪ್ರಯತ್ನದ ಫಲವನ್ನು ನಿನ್ನೆ ನೋಡಿದೆವು ಎಂದರು. ಇದನ್ನೂ ಓದಿ: Chandrayaan-3: ಚಂದ್ರನ ಅಂಗಳದಲ್ಲಿ 3ನೇ ಹೆಜ್ಜೆ ಇಡಲು ಕ್ಷಣಗಣನೆ; ಚಂದ್ರಯಾನ-1, 2 ಕ್ಕೆ ಹೋಲಿಸಿದ್ರೆ ಚಂದ್ರಯಾನ-3 ಹೇಗೆ ಭಿನ್ನ?
ಇಸ್ರೋ (ISRO) ವಿಜ್ಞಾನಿಗಳ ಪರಿಶ್ರಮ, ಭಾರತೀಯರ ಪ್ರಾರ್ಥನೆ ಫಲವಾಗಿ ಬುಧವಾರ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟಿತು. ಇಸ್ರೋ ಸಂಜೆ 6:04ರ ಹೊತ್ತಿಗೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿತು. ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಸಾಕ್ಷಿಯಾಯಿತು.
ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ (Soft Landing) ಮಾಡುವುದು ಸಾಧಾರಣ ಸಾಧನೆಯಲ್ಲ. ಚಂದ್ರನ ಮೇಲೆ ತಮ್ಮ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇರಿಸುವ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಏಕೈಕ ನಾಲ್ಕು ದೇಶಗಳ ಸಾಲಿಗೆ ಭಾರತವೂ ಸೇರಿದೆ. ಚಂದ್ರನಲ್ಲಿ ಈಗಾಗಲೇ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಯಶಸ್ವಿ ಕಾರ್ಯಾಚರಣೆ ನಡೆಸಿವೆ. ಇದರ ಜೊತೆಗೆ ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಮತ್ತು ರೋವರ್ ಇಳಿಸಿದ ನಾಲ್ಕನೇ ದೇಶ ಭಾರತ ಎನಿಸಿಕೊಂಡಿದೆ. ಆದರೆ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮೊದಲ ದೇಶವಾಗಿ ಭಾರತ ಹೆಸರಾಗಿದೆ.
Web Stories